ದಲಿತರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಇಂದು ಪ್ರತಿಕ್ರಿಯಿಸಿದ್ದು, ನನಗೂ ಸಿಎಂ ಆಗುವ ಅರ್ಹತೆ ಇದೆ ಎಂದು ನನಗನಿಸುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ತಾನು ಸಿಎಂ ಆಕಾಂಕ್ಷಿ ಎಂದು ತಿಳಿಸಿದ್ದಾರೆ.
ಇನ್ನು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಚುನಾವಣೆಗೂ ಮುನ್ನ ಸಿಎಂ ಗದ್ದುಗೆಯ ಆಕಾಂಕ್ಷಿಯಾಗಿದ್ದವನು. ಆದರೆ ಪ್ರಸ್ತುತ ಕೆಲವರು ನನಗ ಸಿಎಂ ಸ್ಥಾನ ಬಿಟ್ಟುಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಅಲ್ಲದೆ ಕೆಲವರು ಪಕ್ಷದ ಹೈಕಮಾಂಡ್ಗೂ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ. ಆದರೆ ನಾನು ಹೈಕಮಾಂಡ್ ಹೇಳಿದಂತೆಯೇ ಕಾರ್ಯ ನಿರ್ವಹಿಸಲಿದ್ದೇನೆ ಎಂದರು.
ಬಳಿಕ, ದಲಿತರ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸುವುದು ತಪ್ಪೇ. ನನಗೂ ಅರ್ಹತೆ ಇದೆ ಎಂಬುದರಿಂದ ಮುಖಂಡರು ಈ ರೀತಿಯಲ್ಲಿ ಹೇಳಿರಬಹುದು. ನನಗೂ ಸಿಎಂ ಆಗುವ ಅರ್ಹತೆ ಇದೆ ಎಂದು ನನಗನಿಸುತ್ತದೆ ಎಂದು ಅಚ್ಚರಿ ಮೂಡಿಸಿದರು.
ಇದೇ ವೇಳೆ, ದಲಿತರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಒತ್ತಾಯಿಸುತ್ತಿರುವವರು ಹೊರಗಿನವರು. ಒಳಗಿನವರು ಮಾತನಾಡಿದ್ದರೆ ನಾನು ಪ್ರತಿಕ್ರಿಯಿಸುತ್ತಿದೆ. ಆದರೆ ಹೊಗಿನವರಾದ ಕಾರಣ ನಾನು ಪ್ರತಿಕ್ರಿಯಿಸಲಾರೆ ಎಂದು ಪ್ರತಿಕ್ರಿಯಿಸಲು ನಿರಾಕರಿಸಿದರು.
15ಕ್ಕೂ ಹೆಚ್ಚು ದಲಿತ ಸಂಘಟನೆಗಳ ಮುಖಂಡರು ಇತ್ತೀಚೆಗೆ ಬೆಂಗಳೂರಿನ ಏಟ್ರಿಯಾ ಹೋಟೆಲ್ನಲ್ಲಿ ಸಭೆ ಸೇರಿ ದಲಿತ ನಾಯಕರು ಸಿಎಂ ಆಗುವುದು ರಾಜ್ಯಕ್ಕೆ ಅನಿವಾರ್ಯವಾಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಡಾ.ಜಿ ಪರಮೇಶ್ವರ್ ಅವರಿಗೆ ಸಿಎಂ ಸ್ಥಾನದ ಅವಕಾಶ ಕೊಡಬೇಕು. ಇಲ್ಲವಾದಲ್ಲಿ ಹೈಕಮಾಂಡ್ ಬಳಿ ದೂರು ಸಲ್ಲಿಸುವುದಾಗಿ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಪರಮೇಶ್ವರ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.