ಮದ್ಯ ಕುಡಿದು ಮಧ್ಯರಾತ್ರಿ ಮನೆಗೆ ಬಂದ ಪತಿ ಮಹಾಶಯನೊಬ್ಬ ಪತ್ನಿಗೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿದ ಘಟನೆ ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ. ಗಂಭೀರ ಗಾಯಗಳಿಂದ ನರಳುತ್ತಿರುವ ಪತ್ನಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಪಾನಮತ್ತನಾಗಿ ಮನೆಗೆ ಬಂದ ಲಿಂಗರಾಜು ಪತ್ನಿ ರತ್ಮಮ್ಮಳ ಜತೆ ಜಗಳ ಪ್ರಾರಂಭಿಸಿದ್ದಾನೆ. ನಂತರ ಮಲಗಿದ್ದ ಆಕೆಯ ಮೇಲೆ ಸೀಮೆಎಣ್ಣೆ ಸುರಿದ ಆತ ಬೆಂಕಿ ಕಡ್ಡಿ ಗೀರಿದ್ದಾನೆ.
ಕಿರುಚುತ್ತಾ ಮನೆಯಿಂದ ಹೊರಗೆ ಬಂದ ರತ್ನಮ್ಮಳ ಮೈಗೆ ಹತ್ತಿದ್ದ ಬೆಂಕಿಯನ್ನು ನಂದಿಸಿದ ನೆರೆಹೊರೆಯವರು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ರತ್ಮಮ್ಮಳನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.
ಕಳೆದ 9 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಗಳಿಗೆ 2 ಇಬ್ಬರು ಹೆಣ್ಣುಮಕ್ಕಳಿದ್ದಾರೆ. ವಿಪರೀತ ಕುಡಿಯುವ ಗಂಡ ತನಗೆ ಅತಿಯಾಗಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ ಎಂದು ರತ್ಮಮ್ಮ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.