ತವರು ಮನೆಯಿಂದ ಹಣ ತರಲಿಲ್ಲ ಎಂದು ಮಡದಿಯನ್ನು ಥಳಿಸಿ ಕೊಲೆ ಮಾಡಿರುವ ಹೇಯ ಕೃತ್ಯ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿ ದಾವಣಗೆರೆ ಜಿಲ್ಲೆಯ ಗೊಲ್ಲರಹಟ್ಟಿ ನಿವಾಸಿ ಶಿವಕುಮಾರ್ ನಾಯ್ಕ ಎಂದು ತಿಳಿದು ಬಂದಿದ್ದು, ಆಗಾಗ ತನ್ನ ಮಡದಿ ಸುಮಾಗೆ ತವರು ಮನೆಯಿಂದ ಹಣ ತರುವಂತೆ ಹಿಂಸೆ ನೀಡುತ್ತಿದ್ದ. ಕಳೆದ ರಾತ್ರಿ ಸಹ ತನ್ನ ಮಡದಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಆತ ಬಲವಂತವಾಗಿ ಬಾಯಿಗೆ ವಿಷ ಸುರಿದ್ದಿದ್ದಾನೆ. ಬಳಿಕ ತನ್ನ ಮಡದಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಪರಾರಿಯಾಗಿದ್ದಾನೆ.
ಸುಮಾ ಆಸ್ಪತ್ರೆಯಲ್ಲಿ ದಾಖಲಾಗಿರುವ ವಿಷಯ ತವರು ಮನೆಗೆ ತಲುಪಿದ್ದು, ಅವರ ಕುಟಂಬಸ್ಥರು ಆಸ್ಪತ್ರೆಗೆ ಬರುವುದರಲ್ಲಿ ಆಕೆ ಮೃತಪಟ್ಟಿದ್ದರು.
ಈ ದಂಪತಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇದೆ. ಆರೋಪಿ ಶಿವಕುಮಾರ್ ಈ ಹಿಂದೆ ಕೆಎಸ್ಆರ್ಟಿಸಿ ಉದ್ಯೋಗಿಯಾಗಿದ್ದು, ಮದುವೆಯ ನಂತರ ಕೆಲಸಕ್ಕೆ ರಾಜೀನಾಮೆ ನೀಡಿ ವ್ಯವಸಾಯದಲ್ಲಿ ತೊಡಗಿದ್ದ ಎಂದು ತಿಳಿದು ಬಂದಿದೆ.