ಇಲ್ಲಿನ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಕುಮಾರಸ್ವಾಮಿ ಹಾಗೂ ಹೆಚ್.ಡಿ.ರೇವಣ್ಣ ಅವರು ಬೇರೆಯಾಗುತ್ತಿರುವ ಸುದ್ದಿ ಹಬ್ಬಿದೆಯಲ್ಲ. ಏನಿದು ರೇವಣ್ಣನವರೇ ಎಂದು ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಅವರನ್ನು ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಸದನ ಕೆಲ ಕಾಲ ನಗೆಗಡಲಲ್ಲಿ ತೇಲಿದ್ದ ಸನ್ನಿವೇಶ ಕಂಡು ಬಂತು.
ಕಲಾಪದಲ್ಲಿ ಹಲವು ವಿಷಯಗಳ ಚರ್ಚೆಯಲ್ಲಿ ತೊಡಗಿರುವಾಗಲೇ ಶಾಸಕ ರಮೇಶ್ ಕುಮಾರ್, ದೇವೆಗೌಡರ ಇಬ್ಬರೂ ಪುತ್ರರನ್ನು ನೀವಿಬ್ಬರೂ ಬೇರೆಯಾಗುತ್ತಿರುವ ಸುದ್ದಿ ಹಬ್ಬಿದೆಯಲ್ಲ. ಒಂದೊಂದು ದಿಕ್ಕಿಗೆ ಒಬ್ಬೊಬ್ಬರು ನಡೆದುಕೊಳ್ಳುತ್ತಿದ್ದೀರಂತೆ! ಏನಿದು ರೇವಣ್ಣನವರೇ ಎಂದು ಪ್ರಶ್ನಿಸಿದರು. ಆಗ ಚರ್ಚೆಯಲ್ಲಿ ತೊಡಗಿದ್ದ ಕುಮಾರಸ್ವಾಮಿ ನಗುತ್ತಿದ್ದರು. ಅಷ್ಟರಲ್ಲಾಗಲೇ ಸಭಾಧ್ಯಕ್ಷರು ಹಾಗೊಂದು ಸುದ್ದಿ ಹಬ್ಬಿದೆಯಲ್ಲ ಎಂದರು.
ಬಳಿಕ ಪ್ರತಿಕ್ರಿಯಿಸಿದ ಶಾಸಕ ರೇವಣ್ಣ ನಮ್ಮ ನಡತೆಯ ಬಗ್ಗೆ ಅನುಮಾನವೇ ಬೇಡ ಅಧ್ಯಕ್ಷರೇ, ನಾವಿಬ್ಬರೂ ಬೇರೆಯಾಗುವ ಮಾತೇ ಇಲ್ಲ ಎಂದರು. ಬಳಿಕ ಹಾಗಾದರೆ ಕೌರವರು-ಪಾಂಡವರ ನಡುವೆ ಬಿರುಕೇಕೆ ಎಂದು ಸಭಾಧ್ಯಕ್ಷರು ಪ್ರಶ್ನಿಸಿದರು. ಇದರಿಂದ ಸದನದ ಸದಸ್ಯರು ನಗೆ ಗಡಲಲ್ಲಿ ತೇಲಿದರು. ಅದೇ ಸಮಯದಲ್ಲಿ ಮತ್ತೆ ಪ್ರತಿಕ್ರಿಯಿಸಿದ ಶಾಸಕ ರಮೇಶ್ ಕುಮಾರ್, ಹೇ ಅವ್ರೇನೊ ಅಧ್ಯಕ್ಷರು, ಏನೋ ಹೇಳ್ತಾರೆ. ನೀವೇನೂ ತಿಳ್ಕೊಬೇಡಿ ರೇವಣ್ಣನವರೇ ಎಂದರು. ಅಲ್ಲಿಗೆ ವಿಷಯಕ್ಕೆ ತೆರೆಬಿತ್ತು.