ಬೋರವೆಲ್ ಲಾರಿಯೊಂದು ಪಲ್ಟಿಯಾಗಿ ಐವರು ಕಾರ್ಮಿಕರು ದುರ್ಮರಣವನ್ನಪ್ಪಿದ ಘಟನೆ ಹಾಸನದಲ್ಲಿ ಇಂದು ನಸುಕಿನ ಜಾವ 4.30ರ ಸುಮಾರಿಗೆ ನಡೆದಿದೆ.
ಅರಕಲಗೂಡು ತಾಲ್ಲೂಕಿನ ಮುತ್ತಿಗೆ ಗ್ರಾಮದ ಬಳಿ ಈ ಅವಘಡ ನಡೆದಿದ್ದು, ಲಾರಿ ಕೊಳವೆಬಾವಿ ಕೊರೆದು ಹಿಂತಿರುಗುತ್ತಿತ್ತು ಎಂದು ಹೇಳಲಾಗುತ್ತಿದೆ. ಲಾರಿ ಮುಗುಚಿ ಬಿದ್ದ ಪರಿಣಾಮ ಸ್ಥಳದಲ್ಲೇ ಐವರು ಕಾರ್ಮಿಕರು ಮೃತ ಪಟ್ಟಿದ್ದು ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿವೆ.
ಮೃತರು ಜಾರ್ಖಂಡ್ ಮೂಲದವರೆಂದು ಹೇಳಲಾಗುತ್ತಿದ್ದು ಅವರನ್ನು ಅನುತ್ (21) ಮುಚಿರಾಮ್ (60), ಭೀಮ್ಸಿಂಗ್ (25),ಪುದುರಾಮ್ (55), ಅನಿಲ್ ಮಾತು (60)ಎಂದು ಗುರುತಿಸಲಾಗಿದೆ. ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆಯನ್ನು ಕೈಗೊಂಡಿದ್ದು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಅವರ ಸ್ಥಿತಿ ಕೂಡ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.