ಪಾದಚಾರಿಗಳ ಮೇಲೆ ಕಾರು ಹರಿದ ಪರಿಣಾಮ ಒಂದೇ ಕುಟುಂಬದ ಮೂವರು ಮಹಿಳೆಯರು ದುರ್ಮರಣಕ್ಕೀಡಾಗಿರುವ ಹೃದಯವಿದ್ರಾವಕ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದ ಬಳಿಯ ಸೋಲೂರಿನ ಅಂಚೆಪಾಳ್ಯದ ಬಳಿ ರವಿವಾರ ರಾತ್ರಿ ನಡೆದಿದೆ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಭೀಕರ ಘಟನೆ ನಡೆದಿದ್ದು ನೆಲಮಂಗಲದ ಕುದುರೆಗೆರೆ ಕಾಲೋನಿಯ ನಿವಾಸಿಗಳಾದ ಒಂದೇ ಕುಟುಂಬದ ಏಳು ಮಂದಿ ಸುಬ್ರಮಣ್ಯ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಮನೆಗೆ ಮರಳುತ್ತಿದ್ದರು. ದಾರಿ ಮಧ್ಯೆ ರಸ್ತೆ ಪಕ್ಕ ಇದ್ದ ಹೊಟೆಲ್ ಒಂದರಲ್ಲಿ ಊಟ ಮುಗಿಸಿ ಹೊರಗೆ ನಿಂತಿದ್ದಾಗ ಮೂವರ ಮೇಲೆ ಹರಿದು ಹೋಗಿದೆ. ಪರಿಣಾಮ ರೇಣುಕಪ್ಪ, ಗಂಗಮ್ಮ ಹಾಗೂ ಸರೋಜಮ್ಮ ಎಂಬುವರು ದುರ್ಮರಣವನ್ನಪ್ಪಿದ್ದಾರೆ.ಅಪಘಾತ ಮಾಡಿದ ಕಾರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಮಾಗಡಿಯ ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಅಪರಿಚಿತ ಕಾರ್ ಚಾಲಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮೃತರು ಊಟ ಮಾಡಿದ್ದ ಹೊಟೆಲ್ ಹೊರಗೆ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಅಪಘಾತವೆಸಗಿದ ಕಾರ್ ಸುಳಿವು ಸಿಗಬಹುದೆನೋ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.