ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸಾವಿನ ಅಂಚಿನಲ್ಲಿದ್ದರೂ ಹೃದಯವೈಶಾಲ್ಯತೆ ಮೆರೆದಿದ್ದು, ಸಾವಿನ ಕೊನೆಗಳಿಗೆಯಲ್ಲೂ ತನ್ನ ಅಂಗಾಂಗಗಳನ್ನು ದಾನ ಮಾಡುವಂತೆ ಹೇಳಿ ಯುವಕ ಪ್ರಾಣಬಿಟ್ಟಿದ್ದಾನೆ.
ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ವ್ಯಕ್ತಿ ಹರೀಶ್ ತನ್ನ ಅಂಗಾಂಗ ದಾನ ಮಾಡುವಂತೆ ಹೇಳಿ ಸಾವನ್ನಪ್ಪಿದ. ನೆಲಮಂಗಲದಲ್ಲಿ ಬೈಕ್ ಸವಾರನಿಗೆ ಲಾರಿ ಡಿಕ್ಕಿ ಹೊಡೆದು ದೇಹವೇ ಎರಡು ತುಂಡಾಗಿತ್ತು.
ನೆಲಮಂಗಲದ ಬೇಗೂರಿನ ಬಳಿ ನಡೆದ ಈ ಭೀಕರ ಅಪಘಾತದಲ್ಲಿ ಬೈಕ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ಹರೀಶ್ ದೇಹ ಎರಡು ತುಂಡಾಗಿ ರಸ್ತೆಯ ಮೇಲೆ ಬಿದ್ದಿದೆ. ಆದರೆ ಅರ್ಧ ದೇಹ ತುಂಡಾದರೂ ಕೂಡ ಹರೀಶ್ ಜೀವಂತವಾಗಿದ್ದರು.ಸೊಂಟದ ಒಂದು ಭಾಗ ಒಂದು ಕಡೆ ಬಿದ್ದಿದ್ದರೆ ಇನ್ನರ್ಧ ರುಂಡ ಸಮೇತ ಮುಂಡದ ಭಾಗ ಇನ್ನೊಂದು ಕಡೆ ಬಿದ್ದಿತ್ತು.
ಯುವಕನ ದೇಹ ಎರಡು ಹೋಳಾಗಿದ್ದರೂ ಕೈಗಳನ್ನು ಮೇಲೆತ್ತಿ ಜೀವವುಳಿಸುವಂತೆ ಅಂಗಲಾಚಿದ. ಸಾವು ನಿಶ್ಚಿತವೆಂದು ತಿಳಿದಮೇಲೆ ತನ್ನ ಬಳಿ ನಿಂತಿದ್ದ ಜನರಿಗೆ ಸತ್ತಮೇಲಾದರೂ ತನ್ನ ಅಂಗಾಂಗಗಳನ್ನು ದಾನ ಮಾಡಿ ಎಂದು ಹೇಳುವ ಮೂಲಕ ಹೃದಯವೈಶ್ಯಾಲ್ಯತೆ ಮೆರೆದಿದ್ದ. ಇಂತಹ ಘಟನೆಯನ್ನು ನಾನೆಂದೂ ಕೇಳಿಲ್ಲ. ಹೆಲ್ಮೆಟ್ ಧರಿಸಿದ್ದರಿಂದ ಮೆದುಳು, ಕಣ್ಣಿಗೆ ತೊಂದರೆಯಾಗಿಲ್ಲ. ಮೃತಪಟ್ಟ 6 ಗಂಟೆಯೊಳಗೆ ಕಣ್ಣನ್ನು ದಾನ ಮಾಡಬಹುದು ಎಂದು ನಾರಾಯಣ ನೇತ್ರಾಲಯದ ಮುಖ್ಯಸ್ಥ ಭುಜಂಗ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.