ಶೀಘ್ರದಲ್ಲಿಯೇ ಡೀಸಲ್ ದರ ಕಡಿತಗೊಳ್ಳಲಿದ್ದು, ರಾಜ್ಯ ಸಾರಿಗೆ ಬಸ್ ದರವನ್ನು ಕಡಿಮೆ ಮಾಡಲು ಸರ್ಕಾರ ಮುಂದಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂದು ಇಲ್ಲಿನ ಸುವರ್ಣಸೌಧದ ಎದುರು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗಾಗಲೇ ಪೆಟ್ರೋಲ್ ದರ ಇಳಿಕೆಯಾಗಿದ್ದು, ಡೀಸೆಲ್ ದರವೂ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯ ಸಾರಿಗೆ ಬಸ್ ದರವನ್ನು ಇಳಿಕೆ ಮಾಡಲು ಚಿಂತಿಸುತ್ತಿದೆ. ಹಾಗಾಗಿ ಪೆಟ್ರೋಲ್ ದರದಂತೆಯೇ ಡೀಸೆಲ್ ದರವೂ ಕೂಡ ಇಳಿಕೆಯಾಗಿದ್ದೇ ಆದಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಯಾಣ ದರ ಇಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇತರೆ ರಾಜ್ಯಗಳಿಗೆ ಹೋಲಿಸಿದಲ್ಲಿ ನಮ್ಮ ರಾಜ್ಯದ ಸಾರಿಗೆ ಬಸ್ನ ಪ್ರಯಾಣ ದರ ದುಪ್ಪಟ್ಟು ಹೆಚ್ಚಿದ್ದು, ಪ್ರಯಾಣಿಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹಾಗಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.