ಬೆಂಗಳೂರು ಮಹಿಳೆಯರ ಪಾಲಿಗೆ ಸುರಕ್ಷಿತವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಜನಸಂಚಾರವಿದ್ದ ನಡುರಸ್ತೆಯಲ್ಲಿ ನಿಂತಿದ್ದ ಯುವತಿಯನ್ನು ದುರುಳನೊಬ್ಬ ಹೊತ್ತೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಬಹಳ ತಡವಾಗಿ ವರದಿಯಾಗಿದೆ. ಆ ಸನ್ನಿವೇಶವನ್ನು ನೋಡಿದರೂ ಸಹ ರಸ್ತೆಯಲ್ಲಿ ಸಂಚರಿಸುತ್ತಿದ್ದ ಯಾರು ಕೂಡ ಆಕೆಯ ಸಹಾಯಕ್ಕೆ ಬಂದಿಲ್ಲದಿರುವುದು ವಿಪರ್ಯಾಸ.
ಏಪ್ರಿಲ್ 23ರಂದು ರಾತ್ರಿ 9.30ರ ವೇಳೆಗೆ ಕತ್ರಿಗುಪ್ಪೆ ಮಾರಮ್ಮ ದೇವಾಲಯದ ಸಮೀಪ ನಿಂತಿದ್ದ ಯುವತಿಯನ್ನು ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದ ವ್ಯಕ್ತಿಯೊಬ್ಬ ಆಕೆಯನ್ನು ಹೊತ್ತೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ. ಘಟನೆಯ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಕಳೆದ 8-9 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಮಣಿಪುರ ಮೂಲದ ಯುವತಿಯನ್ನು ಪಕ್ಕದಲ್ಲಿಯೇ ಇದ್ದ ನಿರ್ಮಾಣ ಹಂತದ ಕಟ್ಟಡಕ್ಕೆ ಎತ್ತಿಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಆಕೆ ಕೂಗಿಕೊಂಡ ಬಳಿಕ ಬಿಟ್ಟು ಪರಾರಿಯಾಗಿದ್ದಾನೆ. ಈ ಘಟನೆಯ ದೃಶ್ಯ ಸಮೀಪದ ಮನೆ ಮತ್ತು ಪಿಜಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಘಟನೆಯ ವರದಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತೆ ಪಿಜಿ ಮಾಲೀಕ ಮಂಜುನಾಥ್ ಪೊಲೀಸ್ ದೂರು ದಾಖಲಿಸಿದ್ದಾನೆ.
ಘಟನೆ ಸಂಬಂಧ ಪತ್ರಿಕಾಗೋಷ್ಠಿ ನಡೆಸಿ ವಿವರಣೆ ನೀಡಿರುವ ಪೊಲೀಸ್ ಆಯುಕ್ತ ಎನ್.ಎಸ್,ಮೇಘರಿಕ್ ಘಟನೆ ನಡೆದ ದಿನವೇ ಸ್ಥಳೀಯರು ಈ ಕುರಿತು ಮಾಹಿತಿ ನೀಡಿದ್ದರು. ಅಂದೇ ಚೀತಾ ಪೊಲೀಸರು ಸ್ಥಳಕ್ಕೆ ಕಳುಹಿಸಲಾಗಿತ್ತು. ಆದರೆ ಈ ಕುರಿತು ದೂರು ದಾಖಲಿಸಲು ಪೀಡಿತ ಯುವತಿ ಮತ್ತು ಪಿಜಿ ಮಾಲೀಕರು ಹಿಂಜರಿದಿದ್ದರು. ಈ ರೀತಿಯ ಪ್ರಕರಣಗಳಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈಗ ಪಿಜಿ ಮಾಲೀಕ ದೂರು ದಾಖಲಿಸಿದ್ದು ಆದಷ್ಟು ಬೇಗ ಆರೋಪಿಯನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.