ಅಕ್ರಮ ಗಣಿ ಹಗರಣದ ಆರೋಪದಡಿಯಲ್ಲಿ ಪರಪ್ಪನ ಅಗ್ರಹಾರದಲ್ಲಿ ಕಾರಾಗೃಹವಾಸವನ್ನು ಅನುಭವಿಸುತ್ತಿರುವ ಮಾಜಿ ಸಚಿವ, ಗಣಿ ಧಣಿ ಜನಾರ್ಧನ ರೆಡ್ಡಿ ತೀವೃ ಬೆನ್ನು ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದ ರಾತ್ರಿ ಗಂಭೀರ ನೋವಿನಿಂದ ಬಳಲುತ್ತಿದ್ದ ಅವರನ್ನು ಅವರನ್ನು ನಗರದ ಹೆಬ್ಬಾಳದಲ್ಲಿರುವ ಕೊಲಂಬಿಯಾ ಏಶಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಪದೇ ಪದೇ ಬೆನ್ನು ನೋವಿನಿಂದ ಬಳಲುತ್ತಿರುವ ಅವರು ಈ ರೀತಿ ಆಸ್ಪತ್ರೆಗೆ ದಾಖಲಾಗುತ್ತಿರುವುದು ನಾಲ್ಕನೇ ಬಾರಿ.
ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿತ್ತು .
ರೆಡ್ಡಿ ಜಾಮೀನು ಅರ್ಜಿಯನ್ನು ಪರಿಶೀಲಿಸಿದ ಕೋರ್ಟ್, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಸಿಬಿಐ ತನಿಖೆ ನಡೆಯುತ್ತಿರುವುದರಿಂದ ಜಾಮೀನು ನೀಡಲು ಬರುವುದಿಲ್ಲ ಎಂದಿತ್ತಲ್ಲದೇ, ಮೂರು ತಿಂಗಳ ತರುವಾಯ ಜಾಮೀನು ಅರ್ಜಿ ಸಲ್ಲಿಸುವಂತೆ ರೆಡ್ಡಿಯವರಿಗೆ ಸೂಚನೆ ನೀಡಿತ್ತು
ಜಾಮೀನು ಸಿಗಬಹುದೆಂಬ ವಿಶ್ವಾಸದಲ್ಲಿದ್ದ ರೆಡ್ಡಿ ಇದರಿಂದ ತೀವೃ ನಿರಾಸೆಗೊಳಗಾಗಿದ್ದರು.