ಕಾಡುಗೊಲ್ಲರಿಗೆ ಅಗತ್ಯವಿರುವ ಆ ಎಲ್ಲಾ ರೀತಿಯ ನೆರವನ್ನು ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಯಾರೂ ಕೂಡ ಊರು ತೊರೆಯಬೇಡಿ ಎಂದು ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ಮನವಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಡುಗೊಲ್ಲರು ಊರು ಗೊಲ್ಲರಾಗಬೇಕು. ಊರುಗೊಲ್ಲರು ಊರಿನಲ್ಲಿಯೇ ಉಳಿಯಿರಿ ಎಂದು ಕರೆ ನೀಡಿದರು.
ನನಗೂ ಕೂಡ ಕೃಷ್ಣನ ಯುಕ್ತಿ ರಾಜಕಾರಣದಲ್ಲಿ ಅಗತ್ಯವಿದ್ದು, ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದೆ. ಆದರೂ ಕೂಡ ನನ್ನನ್ನು ಅಹಿಂದಾ ಪರವಾದ ರಾಜಕಾರಣಿ ಎನ್ನುತ್ತಾರೆ. ಇದರ ಅರ್ಥ ನಾನು ಎಲ್ಲಾ ವರ್ಗದ ಜನತೆಗೆ ನಾಯಕನಲ್ಲ ಎಂಬ ಅರ್ಥದಲ್ಲಿ ಕುಟುಕುತ್ತಿದ್ದಾರೆ. ನಾನು ಅಹಿಂದ ವರ್ಗದವರಿಗೆ ಮಾತ್ರ ಅಕ್ಕಿ ನೀಡಿಲ್ಲ, ಯಾರೋ ಸಾಮಾಜಿಕ ನ್ಯಾಯಕ್ಕೆ ವಿರೋಧವಾಗಿದ್ದವರು ಈ ರೀತಿ ಟೀಕೆ ಮಾಡುತ್ತಾರೆ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.
ಇದೇ ವೇಳೆ ಯಾದವ ಸಮುದಾಯದ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಒದಗಿಸುವಂತೆ ಕೆಲ ಸಭಿಕರು ಸಿದ್ದರಾಮಯ್ಯ ಅವರನ್ನು ಘೋಷಣೆ ಕೂಗುವ ಮೂಲಕ ಆಗ್ರಹಿಸಿದರು. ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಯಾದವ ಸಮುದಾಯದ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವುದಾಗಿ ತಿಳಿಸಿದರು.