ಪುತ್ರ ಮತ್ತು ಸ್ನೇಹಿತನ ಜಗಳ ಬಿಡಿಸಲು ಹೋದ ವ್ಯಕ್ತಿಯೋರ್ವರು ಘಟನೆಯಲ್ಲಿ ಸಿಲುಕಿ ತೀವ್ರ ಗಾಯಗೊಂಡು ಸಾವನ್ನಪ್ಪಿರುವ ಘಟನೆ ನಗರದ ಶ್ರೀರಾಂಪುರದ ಓಬಳಿಪುರಂನಲ್ಲಿ ಕಳೆದ ರಾತ್ರಿ ನಡೆದಿದೆ.
ಸಾವನ್ನಪ್ಪಿದ ವ್ಯಕ್ತಿಯನ್ನು ಗುಣಶೇಖರ್(45) ಎಂದು ಹೇಳಲಾಗಿದ್ದು, ಶ್ರೀರಾಂಪುರ ನಿವಾಸಿ ಎಂದು ಹೇಳಲಾಗಿದೆ.
ಪ್ರಕರಣದ ಹಿನ್ನೆಲೆ: ಕಾರ್ತಿಕ್ ಎಂಬಾತ ಮೃತ ವ್ಯಕ್ತಿಯ ಪುತ್ರನಾಗಿದ್ದು, ಈತ ತನ್ನ ಸ್ನೇಹಿತ ಸತ್ಯನೊಂದಿಗೆ ಜಗಳಕ್ಕಿಳಿದಿದ್ದ. ಇದನ್ನು ಕಂಡ ಕಾರ್ತಿಕ್ ತಂದೆ ಜಗಳವನ್ನು ಬಿಡಿಸಲೆತ್ನಿಸಿದ್ದಾರೆ. ಆದರೆ ಈ ವೇಳೆ ಕುಪಿತಗೊಂಡ ಸತ್ಯ ಹಾಗೂ ಆತನ ಸ್ನೇಹಿತರು ಕಾರ್ತಿಕ್ ತಂದೆಯನ್ನು ಮನ ಬಂದಂತೆ ಥಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುಣಶೇಖರ್ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಸ್ಥಳೀಯರು ಅವರನ್ನು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆಯ ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಇನ್ನು ಕಾರ್ತಿಕ್ ಹಾಗೂ ಸತ್ಯ ಎಂಬ ಈ ಯುವಕರು ಹಣಕಾಸಿನ ವಿಷಯಕ್ಕಾಗಿ ಜಗಳವಾಡುತ್ತಿದ್ದರು. ಅಲ್ಲದೆ ಈ ವೇಳೆ ಕುಡಿದ ಮತ್ತಿನಲ್ಲಿದ್ದರು. ಈ ಹಿನ್ನೆಲೆಯಲ್ಲಿ ನಾವು ಏನು ಮಾಡುತ್ತಿದ್ದೇವೆ ಎಂದು ಅವರಿಗೆ ತಿಳಿಯುತ್ತಿರಲಿಲ್ಲ ಇಲ್ಲಿನ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡಿರುವ ಶ್ರೀರಾಂಪುರ ಠಾಣಾ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸತ್ಯ ಸೇರಿದಂತೆ ಆತನ ಸ್ನೇಹಿತರಾದ ಹರೀಶ್ ಮತ್ತು ವಿಜಯ್ ಎಂಬುವವರನ್ನೂ ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.