ಸಮಾಜದಲ್ಲಿನ ಸ್ವಾಸ್ಥ್ಯ ಹಾಳುಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಇಂದು ಹೇಳಿದರು. ಕೋಮುವಾದಿಗಳ ಪರ ಇದ್ದವರು ಹಾಗೆ ಮಾತಾಡ್ತಾರೆ ಎಂದು ಶೋಭಾ ಕರಂದ್ಲಾಜೆ ವಿರುದ್ಧ ಸಿಎಂ ವಾಗ್ದಾಳಿ ಮಾಡಿದರು. ಅಗತ್ಯಬಿದ್ದರೆ ಗೂಂಡಾ ಕಾಯ್ದೆ ಪ್ರಕರಣ ದಾಖಲಿಸುತ್ತೇವೆ ಎಂದೂ ಎಚ್ಚರಿಸಿದರು. ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ತಿಳಿಸಿದರು.
ಪ್ರಮೋದ್ ಮುತಾಲಿಕ್ ಅವರ ಶ್ರೀರಾಮಸೇನೆ ಸಂಘಟನೆಯನ್ನು ನಿಷೇಧಿಸುವ ಚಿಂತನೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ನಿನ್ನೆ ಹೇಳಿಕೆ ನೀಡಿದ್ದರಿಂದ ಸಂಸದೆ ಶೋಭಾ ಕರಂದ್ಲಾಜೆ ಖಾರವಾಗಿ ಪ್ರತಿಕ್ರಿಯಿಸಿದ್ದರು. ತಾಕತ್ ಇದ್ದರೆ ಮುಸ್ಲಿಂ ಸಂಘಟನೆಗಳನ್ನು ಬ್ಯಾನ್ ಮಾಡಲಿ ಎಂದು ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದರು. ಹಿಂದೂ ಪರ ಸಂಘಟನೆಗಳನ್ನು ಕಾನೂನು ಮೂಲಕ ಮಟ್ಟ ಹಾಕಲು ಸಿಎಂ ಯತ್ನಿಸಿದ್ದಾರೆ. ನಾನು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಂಸದೆ ಕರಂದ್ಲಾಜೆ ತಿಳಿಸಿದ್ದರು.
ಪೇಪರ್ ಹಂಚುವ ಮಕ್ಕಳಿಗೆ ಧನ ಸಹಾಯ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮಾಜಿ ರಾಷ್ಟ್ರಪತಿ ಕಲಾಂ ಕೂಡ ಪೇಪರ್ ಹಂಚುತ್ತಿದ್ದರು.ಆದರೆ ಎಲ್ಲರೂ ಅಬ್ದುಲ್ ಕಲಾಂ ಆಗಲು ಸಾಧ್ಯವಿಲ್ಲ. ಅವರಿಂದ ಸ್ಫೂರ್ತಿ ಪಡೆದು ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಪೇಪರ್ ಹಂಚುವ ಮಕ್ಕಳಿಗೆ ಪ್ರಗತಿಪರ ಪತ್ರಕರ್ತರ ಕ್ಷೇಮಾಭಿವೃದ್ಧಿ ಟ್ರಸ್ಟ್ನಿಂದ ಸಹಾಯ ಮಾಡಲಾಗುವುದು ಎಂದು ಸಿಎಂ ಹೇಳಿದರು. ಪತ್ರಿಕೆ ಮಾಲೀಕರು ಶೇ. 1ರಷ್ಟು ಲಾಭಾಂಶವನ್ನು ಪೇಪರ್ ಹಂಚುವ ಮಕ್ಕಳಿಗೆ ನೀಡಬೇಕು ಎಂದೂ ಈ ಸಂದರ್ಭದಲ್ಲಿ ಅವರು ಹೇಳಿದರು.