ಟಿವಿ ನೋಡುತ್ತಿದ್ದ ಅಣ್ಣ ತಮ್ಮಂದಿರಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ದಾರುಣ ಅಂತ್ಯ ಕಂಡ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಭಾನುವಾರ ರಾತ್ರಿ ಅಶೋಕನಗರದ ಇ- ಸ್ಟ್ರೀಟ್ನಲ್ಲಿ ಈ ಘಟನೆ ನಡೆದಿದ್ದು ಮೃತ ದುರ್ದೈವಿಯನ್ನು ಬಾಬು (30) ಎಂದು ಗುರುತಿಸಲಾಗಿದೆ. ಕೊಲೆಗೈದ ಆರೋಪಿ ಸ್ವಾಮಿ(32) ಗಾರ್ಮೆಂಟ್ ಉದ್ಯೋಗಿಯಾಗಿದ್ದಾನೆ. ಮೃತ ಬಾಬು ಹೂ ಕಟ್ಟುವ ಕೆಲಸ ಮಾಡುತ್ತಿದ್ದ.
ಭಾನುವಾರ ರಾತ್ರಿ ಊಟ ಮಾಡಿದ ಬಳಿಕ ಸಹೋದರರು ಟಿವಿ ನೋಡುತ್ತಿದ್ದರು ಈ ಸಂದರ್ಭದಲ್ಲಿ ಬಾಬು ಚಾನೆಲ್ ಬದಲಾಯಿಸಿದ್ದರಿಂದ ಅಣ್ಣ ಸ್ವಾಮಿ ತಕರಾರು ತೆಗೆದ. ಜಗಳ ತಾರಕಕ್ಕೇರಿದಾಗ ಒಡೆದ ಗಾಜಿನಿಂದ ಸ್ವಾಮಿ ಬಾಬುವಿನ ಹೊಟ್ಟೆಗೆ ತಿವಿದಿದ್ದಾನೆ.
ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ ತೀವ್ರ ರಕ್ತಸ್ರಾವದಿಂದ ಮಾರ್ಗ ಮಧ್ಯದಲ್ಲಿಯೇ ಆತ ಕೊನೆಯುಸಿರೆಳೆದಿದ್ದಾನೆ.
ಪ್ರಕರಣದ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.