ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ಅವರನ್ನು ವರ್ಗಾವಣೆ ಮಾಡಿದ್ದ ಗೃಹಇಲಾಖೆ 15 ದಿನಗಳ ಕಾಲ ರಜೆ ಮೇಲೆ ತೆರಳುವಂತೆ ಸೂಚಿಸಿದೆ. ಪೊಲೀಸ್ ಇಲಾಖೆ ಮೂಲಗಳು ಈ ಕುರಿತು ತಿಳಿಸಿವೆ. ಡಿವೈಎಸ್ಪಿಯನ್ನು ವಿಜಯಪುರದಿಂದ ಇಂಡಿಗೆ ವರ್ಗಾವಣೆ ಮಾಡಲಾಗಿತ್ತು. ಅನುಪಮಾ ಶೆಣೈ ಇಂಡಿಯಲ್ಲಿ ಇನ್ನೂ ಅಧಿಕಾರ ಸ್ವೀಕರಿಸಿರಲಿಲ್ಲ.
ಅಷ್ಟರಲ್ಲಿ ಅವರಿಗೆ 15 ದಿನಗಳ ರಜೆ ಮೇಲೆ ತೆರಳುವಂತೆ ಸೂಚಿಸಿದೆ. ಡಿವೈಎಸ್ಪಿ ಅನುಪಮಾ ಶೆಣೈ ಅವರನ್ನು ವರ್ಗಾವಣೆ ಮಾಡಿಸಿದ್ದು ತಾವೇ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ನಾಯ್ಕ ಹೇಳಿಕೆ ನೀಡಿ ಭಾರೀ ವಿವಾದಕ್ಕೆ ಸಿಲುಕಿದ್ದರು.
ತಮ್ಮ ಫೋನ್ ಕರೆಯನ್ನು ಅನುಪಮಾ ಶೆಣೈ ಸ್ವೀಕರಿಸಲಿಲ್ಲ ಎಂಬ ಕಾರಣದ ಮೇಲೆ ಅನುಪಮಾರನ್ನು ತಾವು ವರ್ಗಾವಣೆ ಮಾಡಿದ್ದಾಗಿ ಬಹಿರಂಗವಾಗಿ ಹೇಳಿದ್ದರು. ಅದಕ್ಕೆ ಮುಂಚೆ ಪತ್ರಕರ್ತರ ಪ್ರಶ್ನೆಗೆ ವರ್ಗಾವಣೆ ಹಿಂದೆ ತಮ್ಮ ಕೈವಾಡವಿರಲಿಲ್ಲ ಎಂದು ಹೇಳಿದ್ದರು. ಈ ನಡುವೆ ಸಿಎಂ ಸಿದ್ದರಾಮಯ್ಯ ಕೂಡ ಪರಮೇಶ್ವರ್ ನಾಯ್ಕ್ ಪರ ಬ್ಯಾಟಿಂಗ್ ಬೀಸಿದ್ದಾರೆ. ಇದರಲ್ಲಿ ತಪ್ಪು ಹುಡುಕಿಕೊಂಡು ಹೋಗೋದಕ್ಕೆ ಆಗುತ್ತಾ, ಅನುಪಮಾ ವರ್ಗಾವಣೆ ಆಡಳಿತಾತ್ಮಕ ವಿಚಾರ. ಅಕ್ರಮ ಮರಳುದಂಧೆ ವಿಚಾರದಲ್ಲಿ ವರ್ಗದ ಆರೋಪವಿದ್ದು, ಈ ಬಗ್ಗೆ ತಮಗೇನೂ ತಿಳಿದಿಲ್ಲ ಎಂದು ಸಿಎಂ ಹೇಳಿದರು.