ಬಾಂಬ್ ಇದೆ ಎಂದು ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ವ್ಯಕ್ತಿಯೊಬ್ಬ ಕವರ್ ಎಸೆದ ಘಟನೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದಿದೆ. ಆರೋಪಿಯನ್ನು ಸವಿತಾ ಸಮಾಜದ ಬಿ.ಹೆಚ್. ಪ್ರಸಾದ್ ಎಂದು ಗುರುತಿಸಲಾಗಿದ್ದು, ಆತ ಪಾನಮತ್ತನಾಗಿದ್ದ ಎಂದು ತಿಳಿದು ಬಂದಿದೆ. ಆತನನ್ನು ಬಂಧಿಸಿರುವ ಪೊಲೀಸರು ವಿಚಾರಣೆಯನ್ನು ಕೈಗೊಂಡಿದ್ದಾರೆ.
ಸಮಾರಂಭದಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಲು ಸಿಎಂ ಪ್ರಾರಂಭಿಸಿದಾಗ ಬಾಲ್ಕನಿಯಲ್ಲಿ ನಿಂತಿದ್ದ ಪ್ರಸಾದ್ ಕೂಗಾಡುತ್ತ ಭಾಷಣಕ್ಕೆ ಅಡ್ಡಿ ಪಡಿಸಲು ಪ್ರಯತ್ನಿಸಿದ್ದಾನೆ. ನಮ್ಮ ಸಮಾಜಕ್ಕೆ ಏನು ಮಾಡಿರುವಿರಿ ಎಂದು ಹೇಳಿ, ಬಳಿಕ ಮಾತನಾಡಿ ಎಂದು ಆತ ಸಿಎಂ ಅವರಿಗೆ ಆಗ್ರಹಿಸಿದ್ದಾನೆ. ಯಾವುದಪ್ಪ ನಿಮ್ಮ ಸಮಾಜ ಎಂದು ಸಿಎಂ ಮರುಪ್ರಶ್ನಿಸಿದಾಗ ತನ್ನ ಕೈಯ್ಯಲ್ಲಿದ್ದ ಕವರ್ನ್ನು ಸಿಎಂ ಎಡೆಗೆ ಎಸೆದಿದ್ದಾನೆ. ಒಂದು ಕ್ಷಣ ಅಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ತಕ್ಷಣ ಸಿಎಂ ಅವರನ್ನು ಸುತ್ತುವರೆದ ಪೊಲೀಸರು ಕವರ್ನ್ನು ಪರಿಶೀಲನೆ ಮಾಡಿದಾಗ ಅದು ಚಾಕಲೇಟು ಮತ್ತು ಹೂ ತುಂಬಿದ್ದ ಕವರ್ ಎಂದು ತಿಳಿದು ಬಂದಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪ್ರಜಾಪ್ರಭುತ್ವದಲ್ಲಿ ಇವೆಲ್ಲ ಸಾಮಾನ್ಯ, ಯಾವ ಸಮಾಜಕ್ಕೆ ಅನ್ಯಾಯವಾಗಿದೆಯೋ ಅದನ್ನು ಸರಿಪಡಿಸೋಣ ಎಂದು ಹೇಳಿದ್ದಾರೆ.