ಬಸ್ ಚಾಲಕ ನೀರು ಕುಡಿಯಲು ಯತ್ನಿಸಿದ್ದಾಗ ಮಾರ್ಗವನ್ನು ಸರಿಯಾಗಿ ಗಮನಿಸಿದೇ ಸೇತುವೆಯ ತಡೆಗೋಡೆಗೆ ಗುದ್ದಿದ್ದರಿಂದ ಅಪಘಾತ ಉಂಟಾಯಿತೆಂದು ಬಸ್ನಲ್ಲಿದ್ದ ಪ್ರಯಾಣಿಕ ಬಾಲಮುರುಗನ್ ಎಂಬವರು ಮಾಹಿತಿ ನೀಡಿದ್ದಾರೆ. ಬಾಲಮುರುಗನ್ ಚಾಲಕನ ಹಿಂಭಾಗದಲ್ಲೇ ಕುಳಿತಿದ್ದರು. ಇದರಿಂದ ಚಾಲಕನ ಯಡವಟ್ಟಿನಿಂದ ಅಪಘಾತ ಸಂಭವಿಸಿತೇ ಎಂಬ ಸಂಶಯ ಆವರಿಸಿದೆ. ಟೈರ್ ಸ್ಫೋಟದಿಂದ ತಡೆಗೋಡೆಗೆ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತೆಂದು ಇದಕ್ಕೆ ಮುಂಚೆ ಹೇಳಲಾಗಿತ್ತು.
ಅಪಘಾತದಲ್ಲಿ ಮೃತಪಟ್ಟ ರಾಮಕೃಷ್ಣ(47) ಹೆಬ್ಬರಳು ಗ್ರಾಮದ ನಿವಾಸಿಯಾಗಿದ್ದು, ಬಸ್ ಉರುಳಿಬಿದ್ದಾಗ ತಲೆಭಾಗಕ್ಕೆ ಗಂಭೀರ ಪೆಟ್ಟಾಗಿದ್ದು, ಕಿವಿಯಿಂದ ರಕ್ತ ಸೋರುತ್ತಿತ್ತು. ರಾಮನಗರಕ್ಕೆ ರೇಷ್ಮೆಗೂಡನ್ನು ಮಾರಾಟ ಮಾಡಲು ಹೋಗಿದ್ದ ರಾಮಕೃಷ್ಣ ಮರಳಿಬರುವಾಗ ಅಪಘಾತ ಸಂಭವಿಸಿ ದುರ್ಮರಣವಪ್ಪಿದ್ದಾರೆ. ರಾಮಕೃಷ್ಣ ಅವರ ಕುಟುಂಬದ ಆಕ್ರಂದನ ಹೃದಯವಿದ್ರಾವಕವಾಗಿತ್ತು. ಇನ್ನೂ 6 ಜನರ ತಲೆಗೆ ಗಂಭೀರ ಪೆಟ್ಟಾಗಿಯೆಂದು ಹೇಳಲಾಗುತ್ತಿದೆ.
ಬಸ್ನಲ್ಲಿದ್ದ ಗಾಯಗೊಂಡ ಪ್ರಯಾಣಿಕರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ರೇನ್ನಿಂದ ಬಸ್ ಮೇಲೆಕ್ಕೆತ್ತುವುದು ಹರಸಾಹಸವಾಗಿದೆ. ಇಳಿಜಾರಿನ ಪ್ರದೇಶವಾದ್ದರಿಂದ ಕ್ರೇನ್ ನಿಲ್ಲಿಸಿಕೊಳ್ಳಲು ಸರಿಯಾದ ಜಾಗ ಸಿಗುತ್ತಿಲ್ಲವೆಂದು ಹೇಳಲಾಗುತ್ತಿದೆ.
ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದಿದ್ದರೆ ಇನ್ನಷ್ಟು ಸಾವು ನೋವು ಸಂಭವಿಸುವ ಸಾಧ್ಯತೆಯಿತ್ತು. ಇನ್ನೂ ನಾಲ್ವರ ಬಗ್ಗೆ ಯಾವುದೇ ಮಾಹಿತಿ ಸಿಗದಿರುವುದರಿಂದ ಅವರು ಬಸ್ ಕೆಳಕ್ಕೆ ಸಿಕ್ಕಿರಬಹುದೆಂದು ಹೇಳಲಾಗುತ್ತಿದ್ದು, ಸತ್ತಿದ್ದಾರೋ, ಬದುಕಿದ್ದಾರೋ ಎನ್ನುವುದು ಬಸ್ ಮೇಲೆಕ್ಕೆತ್ತಿದ ಮೇಲೆ ಮಾತ್ರ ಸಂಪೂರ್ಣ ಮಾಹಿತಿ ಸಿಗಲಿದೆ. ಶಿಂಷಾ ನದಿಯಲ್ಲಿ ಕಡಿಮೆ ನೀರಿನ ಹರಿವಿದ್ದಿದ್ದರಿಂದ ಅಪಘಾತದಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಿದೆಯೆಂದು ಹೇಳಲಾಗುತ್ತಿದೆ.