ಜೆಡಿಎಸ್ ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬಲು ಮಾಗಡಿಯಲ್ಲಿ ಜೆಡಿಎಸ್ ಬೃಹತ್ ಸಮಾವೇಶ ಕೆಂಪೇಗೌಡ ಕೋಟೆ ಆವರಣದಲ್ಲಿ ನಡೆಯಿತು. ವೇದಿಕೆಯಲ್ಲೇ ಮಾಗಡಿ ಶಾಸಕ ಬಾಲಕೃಷ್ಣ, ಕುಮಾರಸ್ವಾಮಿ ಅವರಿಗೆ ನೀಡಿದ ಸಂದೇಶದಲ್ಲಿ ನೀವು ಪಕ್ಷದ ಮುಖಂಡರ ಜತೆ ಕುಸ್ತಿಮಾಡಬೇಡಿ, ಕಾಂಗ್ರೆಸ್, ಬಿಜೆಪಿ ಜತೆ ಕುಸ್ತಿ ಮಾಡಿ ಎಂದು ತಿಳಿಸಿದರು. ರಾಜ್ಯದ ಜನ ಬಿಜೆಪಿ ಮತ್ತು ಕಾಂಗ್ರೆಸ್ ಜತೆ ಹೋರಾಟ ಮಾಡಿ ಎಂದು ನಿಮ್ಮ ಕೈಗೆ ಕತ್ತಿ ಕೊಟ್ಟಿದ್ದರು.
ಆದರೆ ಪಕ್ಷದ ಒಳಗಿನ ಮುಖಂಡರ ಜತೆ ಜತೆ ಕುಸ್ತಿ ಮಾಡಬೇಡಿ ಎಂದು ಸಲಹೆ ನೀಡಿದರು. ಪಕ್ಷ ಅಧಿಕಾರಕ್ಕೆ ಬಂದರೆ ನೀವೇ ಸಿಎಂ ಆಗುವುದು, ನಾವಲ್ಲ ಎಂದೂ ಪರೋಕ್ಷ ಟಾಂಗ್ ನೀಡಿದರು. ನಮ್ಮ ಜಿಲ್ಲೆಗೆ ನೀರಾವರಿ ಯೋಜನೆಗಳು ಜಾರಿಯಾಗಬೇಕಷ್ಟೇ. ನೀವು ಮನಸ್ಸು ಮಾಡಿದರೆ ನಮ್ಮನ್ನು ಮಂತ್ರಿ ಮಾಡಬಹುದು. ನಮಗೆ ಮಂತ್ರಿ ಸ್ಥಾನ ನೀಡದಿದ್ದರೂ ಪರ್ವಾಗಿಲ್ಲ. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಬೇಕು. ಅಧಿಕಾರಕ್ಕೆ ಬಂದರೆ ನೀವೇ ಸಿಎಂ ಆಗುವುದು ಎಂದು ಕುಮಾರಸ್ವಾಮಿಗೆ ಹೇಳಿದರು.
ಬಾಲಕೃಷ್ಣ, ಜಮೀರ್, ಚೆಲುವನಾರಾಯಣ ಸ್ವಾಮಿ ಡಿ. ನಾಗರಾಜಯ್ಯ, ಗೋಪಾಲಯ್ಯ ಹಾಜರಿದ್ದರು. ಪಕ್ಷದ ಮುಖಂಡರು ಕಾಂಗ್ರೆಸ್ ಜತೆ ಮೈತ್ರಿ ಮಾತುಕತೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಜಮೀರ್ ಮುಂತಾದವರ ಮೇಲೆ ಕಿಡಿ ಕಾರಿ ಶಿಸ್ತುಕ್ರಮದ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಜತೆ ಕುಸ್ತಿ ಮಾಡುವಂತೆ ಬಾಲಕೃಷ್ಣ ಸಲಹೆ ನೀಡಿದರು.