ದೇವೇಗೌಡರ ಕುಟುಂಬ ಗಾಜಿನ ಮನೆಯಲ್ಲಿಲ್ಲ. ದೇವೇಗೌಡರ ಕುಟುಂಬ ಬೀದಿಯಲ್ಲಿದೆ. ಕಲ್ಲೇಟು ಬೀಳುವುದು ಡಿಕೆಶಿಗೆ ಮಾತ್ರ, ನಮಗಲ್ಲ ಎಂದು ಹಾಸನದಲ್ಲಿ ಕುಮಾರಸ್ವಾಮಿ ಇಂಧನ ಸಚಿವ ಡಿಕೆಶಿಗೆ ತಿರುಗೇಟು ನೀಡಿದ್ದಾರೆ. ಗಾಜಿನ ಮನೆಯಲ್ಲಿದ್ದು ಕಲ್ಲು ಹೊಡೆಯಬಾರದು ಎಂದು ಕುಮಾರಸ್ವಾಮಿ ವಿರುದ್ಧ ಡಿಕೆಶಿ ವಾಗ್ದಾಳಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಡಿಕೆಶಿ ವಾಗ್ದಾಳಿಗೆ ತಿರುಗೇಟು ನೀಡಿದ್ದಾರೆ.
ಲೋಡ್ ಶೆಡ್ಡಿಂಗ್ ಬಗ್ಗೆ ಇಂಧನ ಸಚಿವರಿಗೇ ಮಾಹಿತಿ ಇಲ್ಲ. ವಿದ್ಯುತ್ ಉತ್ಪಾದನೆ, ಬೇಡಿಕೆ ಬಗ್ಗೆ ಇಂಧನ ಸಚಿವರು ಮಾಹಿತಿ ನೀಡಲಿ ಎಂದು ಡಿಕೆಶಿಗೆ ಕುಮಾರಸ್ವಾಮಿ ಸವಾಲು ಹಾಕಿದರು. ಮಳೆಯಾಗಿದ್ದರಿಂದ ಸಾಕಷ್ಟು ವಿದ್ಯುತ್ ಪೂರೈಕೆಯಾಗುತ್ತಿದೆ.
ವಿದ್ಯುತ್ ಕೃತಕ ಅಭಾವದ ಸೃಷ್ಟಿ ಹಿಂದೇ ಬೇರೆಯೇ ಉದ್ದೇಶವಿದೆ ಎಂದು ಕುಮಾರಸ್ವಾಮಿ ಮಾತನಾಡುತ್ತಾ ಹೇಳಿದರು. ಹಿಂದಿನ ಸರ್ಕಾರಗಳಂತೆ ಈಗಲೂ ಹುನ್ನಾರ ನಡೆದಿದೆ. ಬೇರೆ ರಾಜ್ಯದಿಂದ ವಿದ್ಯುತ್ ಖರೀದಿಸುವ ನೆಪದಲ್ಲಿ ದುಡ್ಡು ಹೊಡೆಯುವ ಹುನ್ನಾರ ನಡೆದಿದೆ ಎಂದು ಕುಮಾರಸ್ವಾಮಿ ಹೇಳಿದರು.