ಶಾಪಿಂಗ್ಗೆ ಕರೆದೊಯ್ಯಲು ನಿರಾಕರಿಸಿದ್ದಕ್ಕಾಗಿ, ಮನನೊಂದ 19 ವರ್ಷದ ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಮುಂದಿನ ತಿಂಗಳು ಆಕೆಯ ಮದುವೆ ನಿಶ್ಚಯವಾಗಿತ್ತು.
ಸಿರಿನ್ ಸಾಬು ಎಂಬಾಕೆಯೇ ಈ ದುಷ್ಕೃತ್ಯಕ್ಕೆ ಕೈ ಹಾಕಿದ ಯುವತಿಯಾಗಿದ್ದು ಆಕೆ ಪೇಟಿಂಗ್ ಗುತ್ತಿಗೆದಾರ ಸಯ್ಯದ್ ಅಬ್ದುಲ್ ಎಂಬುವವರ ಮಗಳಾಗಿದ್ದಾಳೆ.
ಬಾಣಸ್ವಾಡಿಯ ರಾಮಸ್ವಾಮಿಪಾಳ್ಯದಲ್ಲಿ ನಡೆದ ಘಟನೆಯಲ್ಲಿ ಕಳೆದ ಸೋಮವಾರ ಸಂಜೆ 6.30 ರ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಆಕೆಯ ಮದುವೆ ನಿಶ್ಚಯವಾಗಿತ್ತು.
ಆಕೆಯ ತಾಯಿ ಮನೆಗೆ ಹಿಂತಿರುಗಿದಾಗ ಮಗಳು ಫ್ಯಾನ್ಲ್ಲಿ ನೇತಾಡುತ್ತಿರುವುದನ್ನು ನೋಡಿದ್ದಾಳೆ. ಮರಣಪತ್ರವೇನೂ ದೊರೆತಿಲ್ಲ. ಆಕೆ ತನ್ನ ಮದುವೆಯ ಸಿದ್ಧತೆಗಾಗಿ ಶಾಪಿಂಗ್ಗೆ ಹೋಗಲು ನಿರ್ಧರಿಸಿದ್ದಳು. ಆದರೆ ಎರಡು ದಿನಗಳ ನಂತರ ಹೋಗೋಣವೆಂದು ಆಕೆಯ ತಂದೆ ಹೇಳಿದ್ದರು ಮತ್ತು ಈದ್ ಹಬ್ಬಕ್ಕೆ ಅವಳಿಗೆ ಕಳಪೆ ದರ್ಜೆಯ ಬಟ್ಟೆಗಳನ್ನು ತರಲಾಗಿತ್ತು. ಈ ಕ್ಷುಲ್ಲಕ ಕಾರಣಕ್ಕೆ ಖಿನ್ನಳಾಗಿದ್ದ ಆಕೆ ಸಾಯುವಂತ ದುಡುಕಿನ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ ಎಂದು ಪೋಲಿಸರು ತಿಳಿಸಿದ್ದಾರೆ.