ಶ್ರೀಕ್ಷೇತ್ರ ಮಲೆಮಹದೇಶ್ವರ ಕ್ಷೇತ್ರದಲ್ಲಿ ಭಕ್ತರು ನೀಡುವ ಗೋವುಗಳನ್ನು ಹರಾಜು ಹಾಕುತ್ತಿರುವ ಶಾಕಿಂಗ್ ಸುದ್ದಿ ಭಕ್ತರ ಕಿವಿಗೆ ಬಿದ್ದಿದ್ದು, ಈ ಪ್ರಕ್ರಿಯೆಗೆ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟಿ ಕೋಟಿ ಆದಾಯವಿರುವ ಶ್ರೀಕ್ಷೇತ್ರದಲ್ಲಿ ಭಕ್ತರಿಂದ ಹರಕೆಯ ರೂಪದಲ್ಲಿ ಬಂದ ಗೋವುಗಳನ್ನು ಹರಾಜು ಹಾಕಿದ ಬಳಿಕ ಕಸಾಯಿಖಾನೆಗೆ ಕಳಿಸಲಾಗುತ್ತಿತ್ತು. ಟಿವಿ ಚಾನೆಲ್ವೊಂದರ ರಹಸ್ಯ ಕಾರ್ಯಾಚರಣೆಯಲ್ಲಿ ಈ ವಿಷಯ ಬಯಲಾಗಿದೆ.
ತಾವು ನೀಡುತ್ತಿರುವ ಹಸುಗಳ ದೇವರ ಸನ್ನಿಧಿಯಲ್ಲಿರುತ್ತದೆಂದು ಭಾವಿಸಿದ್ದ ಭಕ್ತರಿಗೆ ಗೋವುಗಳನ್ನು ಕಸಾಯಿಖಾನೆಗೆ ಕಳಿಸುವ ಸಂಗತಿ ಆಘಾತಕಾರಿಯಾಗಿದೆ. ಚಾಮರಾಜನಗರದಲ್ಲಿ ನೂರಾರು ಭಕ್ತರು ಈ ಕುರಿತು ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುವುದು ಭಕ್ತರ ಧಾರ್ಮಿಕ, ಆಚಾರ ವಿಚಾರಗಳಿಗೆ ಹಾನಿಯಾಗುವ ವಿಚಾರವಾಗಿದ್ದು, ಗೋವುಗಳ ಹರಾಜು ನಿಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.ಧಾರ್ಮಿಕ ಶ್ರದ್ಧಾ ಭಕ್ತಿಯಿಂದ ತಾವು ದಾನವಾಗಿ ನೀಡುವ , ಪ್ರೀತಿಯಿಂದ ಸಾಕಿದ ಗೋವುಗಳು ಕಸಾಯಿಖಾನೆಗೆ ಸೇರುತ್ತಿರುವುದು ತಮಗೆ ತೀವ್ರ ನೋವುಂಟುಮಾಡುವ ಸಂಗತಿಯಾಗಿದೆ ಎಂದು ಭಕ್ತರು ಪ್ರತಿಕ್ರಿಯಿಸಿದ್ದಾರೆ.