ಬೆಂಗಳೂರಿನ ಕೆಪಿಪಿಸಿ ಕಚೇರಿಯಲ್ಲಿ ಮಹಿಳಾ ಕಾರ್ಯಕರ್ತರು ಇಂದು ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದರು. ಬಕೆಟ್ ಹಿಡಿದುಕೊಂಡು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಬಕೆಟ್ ಹಿಡಿದ ಕಾರ್ಯಕರ್ತರಿಗೆ ಮಾತ್ರ ನಿಗಮ, ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಅವಕಾಶವಂಚಿತ ಮಹಿಳಾ ಕಾರ್ಯಕರ್ತರು ಪ್ರತಿಭಟಿಸಿದರು. ಬೆಂಗಳೂರು ನಗರ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ ನೇತೃತ್ವದಲ್ಲಿ ಈ ಧರಣಿ ನಡೆಯಿತು.
ಬೀದರ್ ಜಿಲ್ಲಾ ಕಾಂಗ್ರೆಸ್ನಲ್ಲಿ ಕೂಡ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ನೇಮಕದ ಕುರಿತಂತೆ ಭಿನ್ನಮತ ಸ್ಫೋಟಿಸಿದೆ. ಸಿಎಂ ಆಪ್ತ ಪಂಡಿತ್ ರಾವ್ಗೆ ಕುರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಅರವಿಂದ್ ಅರಳಿ ವಿರೋಧಿಸಿ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಹುದ್ದೆಗೆ ರಾಜೀನಾಮೆಗೆ ಮುಂದಾಗಿದ್ದಾರೆ.
ಪಂಡಿತ್ ರಾವ್ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆಂದು ಅವರು ಆರೋಪಿಸಿದರು. ನಿಗಮ, ಮಂಡಳಿಯಲ್ಲಿ ತಮ್ಮ ಆಪ್ತರಿಗೆ ಸ್ಥಾನ ಸಿಗದಿದ್ದಕ್ಕೆ ಸಚಿವ ಆರ್. ವಿ. ದೇಶಪಾಂಡೆ, ಅಂಬರೀಷ್ ಬೇಸರ ವ್ಯಕ್ತಪಡಿಸಿದ್ದಾರೆ.