ಮೋಜು ಮಸ್ತಿ ಮಾಡುವುದಕ್ಕಾಗಿ ಹಣ ಹೊಂದಿಸಲು ಕಾರ್ ಚಕ್ರಗಳನ್ನು ಕದಿಯುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ಹಾಸನದ ಹೊಸ ಬಡಾವಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಅಭಿಷೇಕ್, ಅರುಣ್, ಸುಜಿತ್ ಎಂದು ಗುರುತಿಸಲಾಗಿದ್ದು ನಗರದ ವಿವಿಧ ಕಾಲೇಜುಗಳಲ್ಲಿ ಇವರು ಐಟಿಐ ಮತ್ತು ಡಿಪ್ಲೋಮಾ ಓದುತ್ತಿದ್ದರು ಎಂದು ತಿಳಿದು ಬಂದಿದೆ.
ರಾತ್ರಿ ಸಮಯದಲ್ಲಿ ಓಮಿನಿ ಕಾರಿನಲ್ಲಿ ನಗರದಲ್ಲೆಲ್ಲ ಸುತ್ತಾಡುತ್ತಿದ್ದ ಅವರು ಮ್ಯಾಗ್ ವ್ಹೀಲ್ಗಳನ್ನು ಕದ್ದು ಬೆಂಗಳೂರಿಗೆ ಕೊಂಡೊಯ್ದು 6 ರಿಂದ 7000 ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದರು. ಬಹಳ ಸುಲಭವಾಗಿ ಹಣ ಗಳಿಸಲು ಅವರು ಈ ಹಾದಿಯನ್ನು ಆಯ್ದುಕೊಂಡಿದ್ದರು ಎಂದು ತಿಳಿದು ಬಂದಿದೆ. ನುರಿತ ಕಳ್ಳರ ರೀತಿಯಲ್ಲಿ ನಈ ಕೃತ್ಯ ನಡೆಸುತ್ತಿದ್ದ ಇವರ ಉಪಟಳದಿಂದ ಕಾರ್ ಮಾಲೀಕರು ಮನೆ ಮುಂದೆ ಕಾರ್ ನಿಲ್ಲಿಸಲು ಭಯ ಪಡುತ್ತಿದ್ದರು.
ಪೊಲೀಸರಿಗೆ ಸಹ ಇದು ತಲೆನೋವಾಗಿ ಪರಿಣಮಿಸಿತ್ತು. ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅವರಿಂದ 19 ಚಕ್ರ, ಮ್ಯಾಗ್ ವ್ಹೀಲ್ ಮತ್ತು ಸೀಟುಗಳು ಸೇರಿದಂತೆ 3.5 ಲಕ್ಷ ಮೌಲ್ಯದ ಕದ್ದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೂವರು ಆರೋಪಿಗಳ ಪೋಷಕರ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದು ಕೇವಲ ಶೋಕಿಗಾಗಿ ಅವರು ಈ ಕೃತ್ಯಕ್ಕೆ ಇಳಿದಿದ್ದರು ಎಂದು ತಿಳಿದು ಬಂದಿದೆ.