ರಾಜ್ಯ ಮಾಧ್ಯಮ ಸಮೀಕ್ಷೆಯೊಂದರಲ್ಲಿ ಸಿಎಂ ಸಿದ್ದರಾಮಯ್ಯಗೆ ಮೂರನೇ ಸ್ಥಾನ ಇದೆ. ಮೊದಲೆರಡು ಸ್ಥಾನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇದ್ದಾರೆ. ಇದು ಮುಖ್ಯಮಂತ್ರಿ ಅವರ ಜನಪ್ರಿಯತೆ ತೋರಿಸುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ವಾಗ್ದಾಳಿ ನಡೆಸಿದರು.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಹಲವಾರು ನಾಯಕರಿದ್ದಾರೆ. ಬೇರೆಯವರಿಗೆ ಅಧಿಕಾರ ಬಿಟ್ಟು ತೊಲಗಿ ಎಂದು ಕಿಡಿಕಾರಿದರು.
ಅಧಿಕಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಸ್ ಮಾಡುತ್ತಿದ್ದಾರೆ. ನಿಮಗೆ ಕಾಂಗ್ರೆಸ್ ಅಧಿಕಾರ ಗೌರವ ಕೊಟ್ಟಿದೆ. ಇಂತಹ ಪಕ್ಷಕ್ಕೆ ಮೋಸ ಮಾಡಬೇಡಿ. ಚುನಾವಣೆಗೆ ಹೆಚ್ಚು ದಿನ ಉಳಿದಿಲ್ಲ. ಎತ್ತಿನಹೊಳೆ ಯೋಜನೆಯೇ ನಿಮ್ಮನ್ನು ನುಂಗುತ್ತಿದೆ. ಕೋಲಾರದ ಜನತೆಗೆ ಪರ್ಯಾಯ ವ್ಯವಸ್ಥೆ ಮಾಡಿ. ದುರಹಂಕಾರ ನಿಮ್ಮನ್ನು ರಾಜಕೀಯವಾಗಿ ಕೊಲ್ಲುತ್ತಿದೆ. ನಿಮ್ಮ ಒಳಿತಿಗೆ ಅಧಿಕಾರದಿಂದ ಕೆಳಗಿಳಿಯಿರಿ ಎಂದು ಸಲಹೆ ನೀಡಿದರು.
ನಂಜನಗೂಡು ಉಪಚುನಾವಣೆ ಕುರಿತು ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡದ ಜನಾರ್ದನ ಪೂಜಾರಿ ಅವರು, ನಿಮ್ಮ ಉಪಚುನಾವಣೆ ಪ್ರಚಾರಕ್ಕಾಗಿ ನಾನು ಮಂಗಳೂರಿನಿಂದ ಬಂದಿದ್ದೆ. ಆಗ ನಿಮ್ಮನ್ನು ಲಿಂಗಾಯತರು ಹಾಗೂ ಬ್ರಾಹ್ಮಣರು ಮನೆಗೆ ಬರಲು ಬಿಟ್ಟಿರಲಿಲ್ಲ. ನಾನು ಇದ್ದ ಕಾರಣಕ್ಕೆ ಎಲ್ಲವನ್ನೂ ಸರಿಪಡಿಸಿದ್ದೆ. ಇಲ್ಲದಿದ್ದರೆ ನೀವು ರಾಜಕೀಯವಾಗಿ ಸಮಾಧಿ ಆಗುತ್ತಿದ್ರಿ ಎಂದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ