ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಗೃಹ ಖಾತೆ ಸಚಿವ ಕೆ.ಜೆ.ಜಾರ್ಜ್ ಮುಖ ನೋಡಲು ಅಸಹ್ಯವಾಗುತ್ತದೆ ಎಂದು ಡಿ.ಕೆ.ರವಿ ತಾಯಿ ಗೌರಮ್ಮ ಸರಕಾರಕ್ಕೆ ಹಿಡಿ ಶಾಪ ಹಾಕಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಡಿ.ಕೆ.ರವಿ ತಾಯಿ ಗೌರಮ್ಮ, ನನ್ನ ಮಗನ ಆತ್ಮಹತ್ಯೆ ಪ್ರಕರಣವನ್ನು ಸರಕಾರ ಮುಚ್ಚಿ ಹಾಕುವ ಪ್ರಯತ್ನ ನಡೆಸುತ್ತಿದೆ. ಇದುವರೆಗೂ ನಮಗೆ ಸರಕಾರದಿಂದ ಯಾವುದೇ ಪರಿಹಾರ ಬಂದಿಲ್ಲ. ನಮ್ಮಂತ ಬಡವರು ಉಳಿಯಬೇಕಾದ್ರೆ ಈ ಭ್ರಷ್ಟ ಸರಕಾರ ತೊಲಗಬೇಕು ಎಂದು ತಮ್ಮ ನೋವನ್ನು ಹಂಚಿಕೊಂಡರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಗೃಹ ಖಾತೆ ಸಚಿವ ಕೆ.ಜೆ.ಜಾರ್ಜ್ ಮುಖ ನೋಡಲು ಅಸಯ್ಯವಾಗುತ್ತದೆ. ಈ ಸರಕಾರವನ್ನು ಹೊಡೆದುರುಳಿಸಲು ಯಾರು ಇಲ್ಲವೇ. ನಮ್ಮ ಕಣ್ಣೀರು ಶಾಪ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಟ್ಟಲಿ ಎಂದು ಹಿಡಿ ಶಾಪ ಹಾಕಿದರು.
ನಮ್ಮಂತ ಬಡವರಿಗೆ ಯಾಕೆ ಈ ರೀತಿ ಶಿಕ್ಷೆ ನೀಡುತ್ತಿದ್ದೀರಿ ಎಂದು ಸರಕಾರವನ್ನು ಪ್ರಶ್ನೆ ಮಾಡಿದ ಡಿ.ಕೆ.ರವಿ ತಾಯಿ ಗೌರಮ್ಮ, ಈ ಭ್ರಷ್ಟ ಸರಕಾರ ಜನರನ್ನು ಮುಂಡಾಯಿಸಿ ತಮ್ಮ ಬೊಕ್ಕಸ ತುಂಬಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಮಂಗಳೂರು ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ತಾವು ಬಚಾವ್ ಆಗಲು ರಾಜ್ಯ ಸರಕಾರ ಗಣಪತಿ ಹೆಂಡತಿ ಪಾವನಾ ಮತ್ತು ಅವರ ಪಾಲಕರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಡಿ.ಕೆ.ರವಿ ತಾಯಿ ಗೌರಮ್ಮ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.