ಕಂಠೀರವ ಸ್ಟುಡಿಯೋದಲ್ಲಿರುವ ಕನ್ನಡ ಚಿತ್ರರಂಗದ ಕಣ್ಮಣಿ ಡಾ. ರಾಜ್ ಸಮಾಧಿಯ ಬಳಿ ಡಾ.ರಾಜ್ ಸ್ಮಾರಕಕ್ಕೆ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು. ಸಿನಿ ತಾರೆಗಳು ಮತ್ತು ಅನೇಕ ಮಂದಿ ಗಣ್ಯರು ರಾಜ್ ಸ್ಮಾರಕದ ಬಳಿ ಹಾಜರಿದ್ದು ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.
ಪಾರ್ವತಮ್ಮ ರಾಜ್ಕುಮಾರ್, ಪುನೀತ್ ರಾಜ್ಕುಮಾರ್, ಶಿವರಾಜ್ ಕುಮಾರ್, ಹಿರಿಯ ನಟಿ ಸರೋಜಾದೇವಿ, ಸೂಪರ್ ಸ್ಟಾರ್ ರಜನಿಕಾಂತ್, ನಟ ರಮೇಶ್ ಅರವಿಂದ್, ರವಿಚಂದ್ರನ್ , ಮೆಗಾಸ್ಟಾರ್ ಚಿರಂಜೀವಿ, ಅಂಬರೀಷ್, ನಿರ್ಮಾಪಕ ಮುನಿರತ್ನ, ಸಚಿವರಾದ ಕೆ.ಜೆ. ಜಾರ್ಜ್, ಸಚಿವ ರಾಮಲಿಂಗಾ ರೆಡ್ಡಿ, ಸದಾನಂದ ಗೌಡ ಮುಂತಾದವರು ಈಗಾಗಲೇ ಆಗಮಿಸಿದ್ದಾರೆ.
ಸ್ಮಾರಕ ಲೋಕಾರ್ಪಣೆ ಮುಂಚೆ ರಾಜ್ ಸಮಾಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಜನೀಕಾಂತ್ ಮುಂತಾದವರು ಸೇರಿದಂತೆ ಅನೇಕ ಗಣ್ಯರು ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಸ್ಮಾರಕ ಲೋಕಾರ್ಪಣೆಯಲ್ಲಿ ಭಾಗಿಯಾಗಿದ್ದ ಎಲ್ಲ ಗಣ್ಯರು ಪಕ್ಕದಲ್ಲಿರುವ ರಂಗಮಂದಿರದಲ್ಲಿ ಹಾಜರಿದ್ದು, ಸಿಎಂ ಸಿದ್ದರಾಮಯ್ಯ ಕೆಲವೇ ಕ್ಷಣದಲ್ಲಿ ಭಾಷಣ ಮಾಡಲಿದ್ದಾರೆ.
ರಾಜ್ ಜೀವನ ಚರಿತ್ರೆ ಕುರಿತು ಸಾಕ್ಷ್ಯಚಿತ್ರ ಹಾಗೂ ಕೃತಿಯನ್ನು ಸಿದ್ದರಾಮಯ್ಯ ಬಿಡುಗಡೆ ಮಾಡಲಿದ್ದಾರೆ. ರಜನಿಕಾಂತ್ ಅವರು ರಾಜ್ ಛಾಯಾಚಿತ್ರದ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.