ಒಂದಂಕಿ ಲಾಟರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪಶ್ಚಿಮ ವಲಯ ಹೆಚ್ಚವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದು, 5 ಗಂಟೆಗೂ ಅಧಿಕವಾಗಿ ವಿಚಾರಣೆ ನಡೆಸಿದ್ದಾರೆ.
ಬೆಳಗ್ಗೆ 11 ಗಂಟೆ ವೇಳೆಯಲ್ಲಿ ಸಿಐಡಿ ಕಚೇರಿಗೆ ಆಗಮಿಸಿದ್ದ ಅಲೋಕ್ ಕುಮಾರ್, 4.30ಕ್ಕೆ ಹೊರ ಬಂದಿದ್ದು, ನಿರಂತರವಾಗಿ 5 ಗಂಟೆಗಳ ಕಾಲ ವಿಚಾರಣಾ ಸಂಧರ್ಭದಲ್ಲಿ ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ. ಇನ್ನು ಈ ವೇಳೆ ಅಲೋಕ್ ಹಲವು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ ಎಂದೂ ತಿಳಿದು ಬಂದಿದೆ.
ಅಲೋಕ್ ಕುಮಾರ್ ಅವರನ್ನು ಸಿಐಡಿ ಅಧಿಕಾರಿಗಳಾದ ಸಿಐಡಿ ಎಸ್ಪಿ ಟಿ.ಡಿ. ಪವಾರ್ ಹಾಗೂ ಇತರೆ ಮೂವರು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಈ ಸುದೀರ್ಘ ವಿಚಾರಣಾ ಸಮಯದಲ್ಲಿ ಪರಿರಾಜನ್ ಜೊತೆಗಿನ ಸಂಪರ್ಕ, ಒಡನಾಟ, ಹಣಕಾಸು ವ್ಯವಹಾರ ಹಾಗೂ ಅಲೋಕ್ ಮತ್ತು ರಾಜನ್ ನಡುವೆ ಸಂಬಂಧ ಬೆಳೆದ ಬಗೆ ಸೇರಿದಂತೆ ಇನ್ನಿತರೆ ಮಾಹಿತಿಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.