ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಬಾಂಬ್ ಸ್ಫೋಟಿಸಿದ ಘಟನೆಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತಿರುವಳ್ಳೂರಿನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಈ ಆರೋಪಿಗಳ ಸೆರೆಗೆ ಮುನ್ನ ಹರಸಾಹಸ ನಡೆಸಿ ಕೊನೆಗೂ ಸೆರೆಹಿಡಿದರು.
ಬಾಂಬ್ ಸ್ಫೋಟದ ಆರೋಪಿಗಳು ತಿರುವಳ್ಳೂರಿನಲ್ಲಿದ್ದಾರೆಂದು ಸುಳಿವನ್ನು ಆಧರಿಸಿ ಎಸಿಪಿ ಪ್ರಸನ್ನ ತಂಡದೊಂದಿಗೆ ಆರೋಪಿಗಳನ್ನು ಬಂಧಿಸಲು ತಿರುವಳ್ಳೂರಿಗೆ ತೆರಳಿದ್ದಾಗ ಸ್ಥಳೀಯರು ಅವರನ್ನು ಹಿಡಿದುಕೊಂಡು ಪ್ರಶ್ನೆಗಳ ಸುರಿಮಳೆ ಸುರಿಸಿದರು. ತಾವು ಪೊಲೀಸರೆಂದರೂ ಸ್ಥಳೀಯರು ನಂಬಲಿಲ್ಲ.
ಕೊನೆಗೆ ಎಸಿಪಿ ಪ್ರಸನ್ನ ಬೆಂಗಳೂರಿಗೆ ಕರೆ ಮಾಡಿ ಅಲ್ಲಿನ ಪೊಲೀಸ್ ಅಧಿಕಾರಿಗಳು ತಿರುವಳ್ಳೂರು ಪೊಲೀಸರಿಗೆ ಮನದಟ್ಟು ಮಾಡಿದ ನಂತರ ಬೆಂಗಳೂರಿನಿಂದ ಮಫ್ತಿಯಲ್ಲಿ ಬಂದಿದ್ದ ಪೊಲೀಸರನ್ನು ಬಿಡಿಸಲಾಯಿತು ಮತ್ತು ತಿರುವಳ್ಳೂರು ಪೊಲೀಸರ ನೆರವಿನೊಂದಿಗೆ ಬಾಂಬ್ ಸ್ಫೋಟದ ಆರೋಪಿಗಳನ್ನು ಸೆರೆಹಿಡಿದು ಬೆಂಗಳೂರಿಗೆ ತರಲಾಯಿತು.