ಮರಕ್ಕೆ ಕಾರು ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಚಿಕ್ಕಮಗಳೂರಿನ ಹಿರೇಗೌಜ ಬಳಿ ಸಂಭವಿಸಿದೆ. ಮೃತರನ್ನು ನಳಿನಾ, ಕಾಂತರಾಜು ಹೆಗ್ಡೆ, ಜಯಚಂದ್ರ ಹೆಗ್ಡೆ ಎಂದು ಹೇಳಲಾಗಿದೆ.
ಸ್ವಿಫ್ಟ್ ಕಾರು ವೇಗವಾಗಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ. ಮೃತರು ತೀರ್ಥಹಳ್ಳಿಯ ಮೇಗರಹಳ್ಳಿ ನಿವಾಸಿಗಳಾಗಿದ್ದು, ಚಿಕ್ಕಮಗಳೂರಿನ ಅಳಿಯನ ಮನೆಗೆ ಹೊರಟಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಕಾರು ಮರಕ್ಕೆ ಡಿಕ್ಕಿ ಹೊಡೆದ ಕೂಡಲೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪೊಲೀಸರು ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಸುತ್ತಿದ್ದಾರೆ.