Select Your Language

Notifications

webdunia
webdunia
webdunia
webdunia

ಬಿಜೆಪಿಯಲ್ಲಿ ಮತ್ತೆ ಆಪರೇಷನ್ ಕಮಲ: ಕಾಂಗ್ರೆಸ್‌ನ ಬಿಬಿಎಂಪಿ ಸದಸ್ಯ 2.5 ಕೋಟಿಗೆ ಬಿಕರಿ ?!

ಬಿಜೆಪಿಯಲ್ಲಿ ಮತ್ತೆ ಆಪರೇಷನ್ ಕಮಲ: ಕಾಂಗ್ರೆಸ್‌ನ ಬಿಬಿಎಂಪಿ ಸದಸ್ಯ 2.5 ಕೋಟಿಗೆ ಬಿಕರಿ ?!
ಬೆಂಗಳೂರು , ಶುಕ್ರವಾರ, 4 ಸೆಪ್ಟಂಬರ್ 2015 (15:40 IST)
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಗ್ಗೆ ಅಪಸ್ವರವೆತ್ತಿದ್ದ ಬಿಜೆಪಿ ಪ್ರಸ್ತುತ ತಾನೂ ಕೂಡ ಗದ್ದುಗೆ ಏರಲು ರಣತಂತ್ರ ರೂಪಿಸುತ್ತಿದ್ದು, ಈ ಹಿಂದೆ ನಡೆಸಿದ್ದ ರೀತಿಯಲ್ಲಿಯೇ ಪ್ರಸ್ತುತವೂ ಆಪರೇಶನ್ ಕಮಲ ನಡೆಸಲು ನಿರ್ಧರಿಸಿದೆ. 
 
ಹೌದು, ಕಾಂಗ್ರೆಸ್ ಶಾಸಕ ಎಸ್.ಟಿ. ಸೋಮಶೇಖರ್ ಅವರು ಬಿಜೆಪಿ ವಿರುದ್ಧ ಇಂತಹ ಗಂಭೀರ ಆರೋಪವನ್ನು ಮಾಡಿದ್ದು, ಯಲಹಂಕ ವ್ಯಾಪ್ತಿಯಲ್ಲಿ ಬರುವ ಚಾಡೇಶ್ವರಿ ವಾರ್ಡ್‌ನ ಕಾಂಗ್ರೆಸ್ ಕಾರ್ಪೊರೇಟರ್ ಪದ್ಮಾವತಿ ಅವರ ಪತಿ ಅಮರನಾಥ್ ಅವರಿಗೆ 2.5 ಕೋಟಿ ನೀಡುವ ಆಮಿಷವೊಡ್ಡಿ ರಾಜೀನಾಮೆ ನೀಡುವಂತೆ ಬಿಜೆಪಿ ಈಗಾಗಲೇ ದುಂಬಾಲು ಬೀಳುತ್ತಿದ್ದು, ಅಪರೇಶನ್ ಕಮಲ ನಡೆಸಲು ಸಿದ್ಧವಾಗಿದೆ. ಆರ್.ಅಶೋಕ್ ಅವರ ನೇತೃತ್ವದಲ್ಲಿ ಈ ಪ್ರಯತ್ನಗಳು ನಡೆಯುತ್ತಿದ್ದು, ಮಧು ಎಂಬುವವರ ಮೊಬೈಲ್‌ನಿಂದ ಅವರಿಗೆ ಕರೆ ಮಾಡಲಾಗಿದೆ ಎಂದು ಆರೋಪಿಸಿದರು.
 
ಶಾಸಕರ ಮಾಹಿತಿ ಪ್ರಕಾರ, ಆಗಸ್ಟ್ 31ರ ರಾತ್ರಿ 8.30ರ ವೇಳೆಯಲ್ಲಿ ಅಮರನಾಥ್ ಅವರಿಗೆ ಕರೆ ಮಾಡಲಾಗಿದ್ದು, 2.5 ಕೋಟಿ ರೂ. ಆಮಿಷವೊಡ್ಡಲಾಗಿದೆ. ಅಲ್ಲದೆ ಮುಂದಿನ ಚುನಾವಣೆಗೆ ಬಿಜೆಪಿಯಿಂದಲೇ ಟಿಕೆಟ್ ನೀಡುವ ಭರವಸೆ ನೀಡಲಾಗಿದೆಯಂತೆ. 
 
ಮಹಿಳಾ ಕಾರ್ಪೊರೇಟರ್ ಪತಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ವ್ಯಕ್ತಿ, ಮಾತನ್ನಾರಂಭಿಸಿದ ಮೊದಲಾರ್ಧದಲ್ಲಿಯೇ ಸಾಲ ಎಷ್ಟಿದೆ ಎಂದು ಪ್ರಶ್ನಿಸಿದ್ದು, ಚುನಾವಣೆಗಾಗಿ ನೀವು ಮಾಡಿರುವ ಸಾಲವನ್ನು ಪ್ರಸ್ತುತ ನೀಡುವ 2.5 ಕೋಟಿಯಿಂದ ತೀರಿಸಿಕೊಳ್ಳಿ ಎಂದಿದ್ದಾರೆ. 
 
ನೀವು ಸದ್ಯ ಕಾರ್ಪೊರೇಟರ್ ಹುದ್ದೆಗೆ ರಾಜೀನಾಮೆ ನೀಡಿ. ಮುಂದಿನ ಚುನಾವಣೆಯಲ್ಲಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರು ನಿಮ್ಮ ಪರವಾಗಿ ಪ್ರಚಾರ ನಡೆಸುತ್ತಾರೆ. ಅಲ್ಲದೆ ಪ್ರಚಾರದ ಖರ್ಚಿಗಾಗಿ ಪಕ್ಷದ ವತಿಯಿಂದಲೇ ನೀಡುತ್ತೇವೆ. ಇದಲ್ಲದೆ ಕಾಂಗ್ರೆಸ್‌ನಲ್ಲಿ ಪ್ರಸ್ತುತ ಯಾವುದೂ ಸರಿಯಿಲ್ಲ. ದೇವರು ನಿಮಗೆ ಪ್ರಸ್ತುತ ಅವಕಾಶ ಕೊಟ್ಟಿದ್ದಾನೆ. ಆ ಅವಕಾಶ ಸದ್ಬಳಕೆ ಮಾಡಿಕೊಳ್ಳಿ. ಬುಧವಾರ ಅಥವಾ ಶುಕ್ರವಾರ ನಿಮ್ಮನ್ನು ನಮ್ಮ ಪಕ್ಷದ ಮುಖಂಡರು ಸಂಪರ್ಕಿಸುತ್ತಾರೆ ಎಂದಿರುವ ವ್ಯಕ್ತಿ, ನಿಮ್ಮದೇ ಕಾಂಗ್ರೆಸ್ ಪಕ್ಷದಿದಂದ ಪ್ರಸ್ತುತ 10ಕ್ಕೂ ಅಧಿಕ ಮಂದಿ ಕಾರ್ಪೊರೇಟರ್‌ಗಳು ಬಿಜೆಪಿ ಸೇರಲು ತಯಾರಿದ್ದಾರೆ ಎಂಬ ಸುಳಿವನ್ನೂ ನೀಡಿದ್ದಾರೆ ಎನ್ನಲಾಗಿದೆ. 

Share this Story:

Follow Webdunia kannada