ಬಿಜೆಪಿ ಕಚೇರಿ ಎದುರು ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ ಗಾಯಾಳು ಯವತಿ ಪರಿಹಾರ ಕೋರಿ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡಿದ್ದ ಹೈಕೋರ್ಟ್ ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಅರ್ಜಿದಾರೆ, ಗಾಯಾಳು ಯುವತಿ ಲಿಷಾ ಅವರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ 1 ಕೋಟಿ ರೂ. ಪರಿಹಾರ ಹಾಗೂ ವಿಕಲಚೇತನ ಕೋಟಾದಡಿಯಲ್ಲಿ ಉದ್ಯೋಗ ನೀಡಬೇಕೆಂದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡರೂ ಕೂಡ ನಾಳೆಗೆ ಮುಂದೂಡಲಾಯಿತು.
ಪ್ರಕರಣದ ಹಿನ್ನೆಲೆ: ಕಳೆದ 2013ನೇ ಸಾಲಿನಲ್ಲಿ ನಗರದ ಮಲ್ಲೇಶ್ವರಂ ಕಚೇರಿಯ ಮುಂಭಾಗದಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ವಿದ್ಯಾರ್ಥಿನಿ ಲಿಷಾ ತೀವ್ರವಾಗಿ ಗಾಯಗೊಂಡಿದ್ದಳು. ಪರಿಣಾಮ ಕಾಲಿಗೆ ತೀವ್ರ ತೆರನಾದ ಪೆಟ್ಟಾಗಿ ವಿಕಲಾಂಗಿಯಾಗಿರುವ ಈಕೆ ಇದಾಗಲೇ 7 ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲೇನಿದೆ ?
ಯಾರೋ ಮಾಡಿದ ತಪ್ಪಿಗೆ ನಾನು ಸಿಲುಕಿ ಬಲಿಪಶುವಿನಂತಾಗಿದ್ದೇನೆ. ಆದ್ದರಿಂದ ನನ್ನ ಜೀವನ ಕಠೋರವಾಗಿದ್ದು, ಸರ್ಕಾರದ ವತಿಯಿಂದ 1 ಕೋಟಿ ರೂ. ಪರಿಹಾರ, ವಿಕಲಚೇತನ ಕೋಟಾದಡಿ ಸರ್ಕಾರಿ ಉದ್ಯೋಗ ಹಾಗೂ ಮುಂದಿನ ವೈದ್ಯಕೀಯ ವೆಚ್ಚವನ್ನೂ ಸರ್ಕಾರವೇ ಭರಿಸಬೇಕು ಎಂದು ಮನವಿ ಮಾಡಿರುವ ಯುವತಿ ಉಗ್ರರ ಅಟ್ಟಹಾಸಕ್ಕೆ ಬಲಿಪಶುಗಳಾಗಿ ನರಳುವಂತಹವರಿಗೆ ಸೂಕ್ತ ನ್ಯಾಯ ದೊರಕಿಸಿಕೊಡುವುದು ಅಗತ್ಯವಾಗಿದ್ದು, ರಾಷ್ಟ್ರೀಯ ನೀತಿಯನ್ನು ಜಾರಿಗೊಳಿಸಬೇಕು ಎಂದೂ ಕೂಡ ಮನವಿ ಮಾಡಿದ್ದಾಳೆ.