ಬೆಂಗಳೂರಿನಲ್ಲಿರುವ ಮಹಿಳಾ ಟೆಕ್ಕಿ ಮೇಲೆ ಜ್ಯೋತಿಷ್ಯ ಕೇಂದ್ರದ ಜ್ಯೋತಿಷಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ವರದಿಯಾಗಿದೆ. ಹೊಯ್ಸಳನಗರದಲ್ಲಿರುವ ಅಗಸ್ತ್ಯನಾಡಿ ಜ್ಯೋತಿಷ್ಯ ಕೇಂದ್ರ ನಡೆಸುತ್ತಿದ್ದ ಪಂಡಿತ್ ದಾಮೋದರ್ ಬಳಿ ಮಹಿಳಾ ಟೆಕ್ಕಿ ತನ್ನನ್ನು ಮದುವೆಯಾಗುವ ಹುಡುಗನ ಜಾತಕ ಕೇಳಲು ಹೋಗಿದ್ದಾಗ, ಮಂತ್ರಿಸಿದ ನೀರನ್ನು ಟೆಕ್ಕಿಗೆ ಕುಡಿಯಲು ಕೊಡುತ್ತಾನೆ.
ಆಗ ಟೆಕ್ಕಿಗೆ ಪ್ರಜ್ಞೆ ತಪ್ಪಿದ ನಂತರ ಅವಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಪ್ರಯತ್ನಿಸಿದ್ದಾನೆ. ಸುಮಾರು 12 ವರ್ಷಗಳಿಂದ ಜ್ಯೋತಿಷ್ಯ ಕೇಂದ್ರವನ್ನು ನಡೆಸುತ್ತಿದ್ದ ದಾಮೋದರ್. ಅಂತರ್ಜಾಲದಲ್ಲಿ ಜ್ಯೋತಿಷಿಯ ಬಗ್ಗೆ ಮಾಹಿತಿ ಪಡೆದ ಯುವತಿ ತನ್ನನ್ನು ಮದುವೆಯಾಗುವ ಹುಡುಗನ ಭವಿಷ್ಯ ತಿಳಿಯಲು ಬಯಸಿದ್ದಳು.
ಆದರೆ ಪಂಡಿತ ದಾಮೋದರ್ ಕಾಮಲಾಲಸೆಗೆ ಅವಳು ಬಲಿಯಾದಳು. ಪ್ರಜ್ಞೆ ಮರಳಿಬಂದ ಬಳಿಕ ನಡೆದ ಸಂಗತಿ ಅರಿವಾದ ಯುವತಿ ಪೊಲೀಸರಿಗೆ ದೂರು ನೀಡಿದಳು. ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.