ಜನವರಿ 31ರಂದು ಟಾಂಜಾನಿಯಾ ಮೂಲದ ಯುವತಿಯ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ತಿಳಿಸಿದ್ದಾರೆ. ಹೆಸರಘಟ್ಟದ ಸಮೀಪವಿರುವ ಗಣಪತಿಪುರಕ್ಕೆ ಪೊಲೀಸ್ ಅಧಿಕಾರಿಗಳು ಇದಕ್ಕೆ ಸಂಬಂಧಿಸಿದಂತೆ ಭೇಟಿ ನೀಡಿದ್ದಾರೆ.
ಈ ಕುರಿತು ತಕ್ಷಣವೇ ತನಿಖೆ ಮಾಡಲು ಹೇಳಿರುವುದಾಗಿ ಸಿಎಂ ತಿಳಿಸಿದ್ದು, ಈ ಸಂಬಂಧ ಐವರನ್ನು ಬಂಧಿಸಲಾಗಿದೆಯೆಂದು ತಿಳಿಸಿದರು. ಈ ಕುರಿತು ಪತ್ರಿಕಾ ಗೋಷ್ಠಿ ಕರೆದು ಗೃಹಸಚಿವ ಪರಮೇಶ್ವರ್ ವಿವರಿಸಿದ್ದು, ಈ ಕುರಿತು ಮುಖ್ಯಮಂತ್ರಿಗಳು ವಿದೇಶಾಂಗ ಸಚಿವರಿಗೆ ವಿವರಣೆ ನೀಡಿದ್ದಾರೆ. 31ರಂದು ಸಂಜೆ 7 ಗಂಟೆಗೆ ಸೂಡಾನ್ ವಿದ್ಯಾರ್ಥಿ ಮಹಮದ್ ಇಸ್ಮಾಯಿಲ್ ಫಿಯೆಟ್ ಕಾರಿನಲ್ಲಿ ಕುಡಿದ ಅಮಲಿನಲ್ಲಿ ಚಾಲನೆ ಮಾಡುವಾಗ ಹೆಸರಘಟ್ಟದ ಹತ್ತಿರ ನಡೆದುಹೋಗುತ್ತಿದ್ದ ಮಹಿಳೆ ಶಬಾನಾ ಮೇಲೆ ಕಾರುಡಿಕ್ಕಿಹೊಡೆದಿದ್ದರಿಂದ ಅವರು ಮೃತಪಟ್ಟಿದ್ದರು. ಶಬಾನಾ ಪತಿ ಗಂಭೀರ ಗಾಯಗೊಂಡಿದ್ದು ಅವರು ಆಸ್ಪತ್ರೆ ಸೇರಿದ್ದಾರೆ.
ಈ ಮಧ್ಯೆ ನೂರಾರು ಜನ ತಕ್ಷಣ ಅಲ್ಲಿ ಸೇರಿ ಕಾರಿಗೆ ಬೆಂಕಿ ಹಚ್ಚುತ್ತಾರೆ. ಈ ಘಟನೆ ಆದ ಮೇಲೆ ಸಪ್ತಗಿರಿ ಕಾಲೇಜಿನ ಹತ್ತಿರ ಬರ್ತಾಇದ್ದ ನಾಲ್ಕು ಜನ ತಾಂಜಾನಿಯ ವಿದ್ಯಾರ್ಥಿಗಳ ಜತೆ ಗುಂಪೊಂದು ಜಗಳವಾಡಿ ವಿದ್ಯಾರ್ಥಿನಿ ಲಿನಾ ಮಾರ್ಟಿನ್ ಮೇಲೆ ಹಲ್ಲೆ ಮಾಡಿ ಅವಳ ಬಟ್ಟೆಯನ್ನು ಹರಿದುಹಾಕುತ್ತಾರೆ.
ವಿದ್ಯಾರ್ಥಿನಿ ಬಸ್ ಹತ್ತಿದಾಗ ಬಸ್ಸಿನಲ್ಲಿದ್ದವರು ಅವಳನ್ನು ದೂಡುತ್ತಾರೆ. ಆಗ ಅಲ್ಲಿಗೆ ಆಗಮಿಸಿದ ಇರಾನಿ ವಿದ್ಯಾರ್ಥಿಯೊಬ್ಬ ಲಿನಾ ಮಾರ್ಟಿನ್ರನ್ನು ರಕ್ಷಣೆ ಮಾಡುತ್ತಾರೆ. ಈಗಾಗಲೇ ಪ್ರಕರಣ ಸಂಬಂಧ ದೂರು ದಾಖಲಿಸಲಾಗಿದೆ. ವಿದೇಶಾಂಗ ಸಚಿವಾಲಯಕ್ಕೂ ನಾವು ಮಾಹಿತಿ ನೀಡಿದ್ದೇವೆ ಎಂದು ಪರಮೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.