ಟಾಂಜಾನಿಯಾ ಯುವತಿ ಮೇಲೆ ಹಲ್ಲೆ ಪ್ರಕರಣ ಕುರಿತು ಪೊಲೀಸರಿಗೆ ಎಫ್ಐಆರ್ ಮಾಡಲು ಹೇಳಿದ್ದೇನೆ. ಯಾಕೆ ತಕ್ಷಣ ಕ್ರಮ ತೆಗೆದುಕೊಂಡಿಲ್ಲ ಎಂದು ತನಿಖೆ ಮಾಡಲು ಹೇಳಿದ್ದೇನೆ. ಐವರನ್ನು ಇದುವರೆಗೆ ಬಂಧಿಸಲಾಗಿದ್ದು, ಅವರ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ವಿದೇಶಾಂಗ ಸಚಿವೆಗೆ ತಾವು ಈ ಘಟನೆ ಬಗ್ಗೆ ವಿವರಣೆ ನೀಡಿರುವುದಾಗಿಯೂ ಸಿಎಂ ತಿಳಿಸಿದರು.
ದಿಗ್ವಿಜಯ್ ಸಿಂಗ್ ಟ್ವಿಟರ್ ಮಾಡಿ ಈ ಕುರಿತು ರಾಹುಲ್ ಗಾಂಧಿ ವರದಿ ಕೇಳಿದ್ದಾರೆಂದು ತಿಳಿಸಿರುವ ಬಗ್ಗೆ ತಮಗೆ ತಿಳಿದಿಲ್ಲ. ಹೈಕಮಾಂಡ್ನಿಂದ ಯಾವುದೇ ವರದಿ ಕೇಳಿರುವ ಬಗ್ಗೆ ತಮಗೆ ಮಾಹಿತಿ ಬಂದಿಲ್ಲ ಎಂದು ತಿಳಿಸಿದರು. ರಾಷ್ಟ್ರೀಯ ಮಹಿಳಾ ಆಯೋಗವು ಈ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿದ್ದು, ರಾಜ್ಯಸರ್ಕಾರಕ್ಕೆ ನೋಟಿಸ್ ನೀಡಿದ್ದು, ವಿವರಣೆಯನ್ನು ಕೋರಿದೆ.
ಭಾರತದಲ್ಲಿನ ಆಫ್ರಿಕನ್ ವಿದ್ಯಾರ್ಥಿಗಳು ಭಯಗೊಂಡಿದ್ದಾರೆ. ಇದು ಜನಸಮೂಹದ ನಡುವೆ ನಡೆದ ಗಲಾಟೆಯಲ್ಲ. ಕೆಲವು ವಿದ್ಯಾರ್ಥಿಗಳನ್ನು ಬೇಕೆಂದೇ ಟಾರ್ಗೆಟ್ ಮಾಡಿದ್ದಾರೆ. ವಿದ್ಯಾರ್ಥಿಗಳು ಕಪ್ಪಗಿದ್ದ ಕಾರಣ ಟಾರ್ಗೆಟ್ ಮಾಡಿದ್ದಾರೆ ಎಂದು ಟಾಂಜಾನಿಯಾ ಹೈಕಮೀಷನರ್ ಆರೋಪ ಮಾಡಿದ್ದಾರೆ.