ಕಳೆದ ರವಿವಾರ ಚಿರತೆ ಕಾಣಿಸಿಕೊಂಡಿದ್ದ ಮಾರತಹಳ್ಳಿ ಸಮೀಪದ ವಿಬ್ಗಯಾರ್ ಶಾಲಾ ಆವರಣದಲ್ಲಿ ಮತ್ತೆರಡು ಚಿರತೆಗಳು ಕಾಣಿಸಿಕೊಂಡಿವೆ ಎಂಬುದು ವದಂತಿ ಎಂದು ಹೇಳಲಾಗುತ್ತಿದೆ.
ಕಳೆದ ರವಿವಾರ ಚಿರತೆಯೊಂದು ಶಾಲೆಯಲ್ಲಿ ಕಾಣಿಸಿಕೊಂಡು ಆತಂಕವನ್ನು ಸೃಷ್ಟಿಸಿತ್ತು. ಆ ಘಟನೆಯಿಂದ ಸುತ್ತಮುತ್ತಲಿನ ನಿವಾಸಿಗಳು ಇನ್ನು ಹೊರಬಂದಿಲ್ಲ. ಪೋಷಕರು ಕೂಡ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಹೀಗಿರುವಾಗ ಮತ್ತೆರಡು ಚಿರತೆಗಳು ಅದೇ ಸ್ಥಳದಲ್ಲಿ ಕಾಣಿಸಿಕೊಂಡಿವೆ ಎಂಬ ವದಂತಿ ಹಬ್ಬಿದೆ.
ವಿಬ್ಗಯಾರ್ ಶಾಲೆಯ ಬಳಿ ಇರುವ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರೊಬ್ಬರು ತಾವು ನಿನ್ನೆ ಸಂಜೆ 7. 30ರ ಸುಮಾರಿಗೆ ಚಿರತೆ ಕಾಣಿಸಿಕೊಂಡಿದೆ ಎಂದು ಹೇಳಿದ್ದರು. ಆದರೆ ಈ ಕುರಿತು ಅವರಿಗೆ ಸ್ಪಷ್ಟನೆ ಇಲ್ಲ. ಆದರೂ ಮುಂಜಾಗೃತಾ ಕ್ರಮವಾಗಿ ಅರಣ್ಯ ಅಧಿಕಾರಿಗಳು ಶಾಲೆಯ ಹಿಂಬದಿ ಇರುವ ನೀಲಗಿರಿ ತೋಪಿನಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಶಾಲೆಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸಲಾಗುತ್ತಿದೆ.
ಮಕ್ಕಳ ಸುರಕ್ಷತಾ ದೃಷ್ಠಿಯಿಂದ ಶಾಲೆಗೂ ಸಹ ಇಂದು ರಜೆ ಘೋಷಿಸಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.