ಬಿಬಿಎಂಪಿ ಅಧಿಕಾರದ ಗದ್ದುಗೆ ಏರಲು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಒಗ್ಗೂಡಿ ಮೈತ್ರಿ ಮಾಡಿಕೊಳ್ಳುವ ಯತ್ನದಲ್ಲಿದ್ದು, ಇಂದು ಜೆಡಿಎಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರು ರಾಜ್ಯದ ಕೊಲ್ಲಂ ನಗರದಲ್ಲಿ ಬೀಡು ಬಿಟ್ಟಿರುವ ಕಾರ್ಪೊರೇಟರ್ಗಳೊಂದಿಗೆ ಇಂದು ಮಾತಕತೆ ನಡೆಸಲಿದ್ದಾರೆ.
ಇಲ್ಲಿನ ರಾವಿ ಎಂಬ ಹೆಸರಿನ ಐಶಾರಾಮಿ ರೆಸಾರ್ಟ್ನಲ್ಲಿ ಬೀಡು ಬಿಟ್ಟಿರುವ ಜೆಡಿಎಸ್ ಕಾರ್ಪೊರೇಟರ್ಗಳು, ಕಾಂಗ್ರೆಸ್ ಮೈತ್ರಿ ಸಂಬಂಧ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಶಾಸಕ ಶ್ರೀನಿವಾಸ್ ಮೂರ್ತಿ ಕೊಲ್ಲಂಗೆ ತೆರಳಿದ್ದು, ಜೆಡಿಎಸ್ ನ ಮತ್ತೋರ್ವ ಶಾಸಕ ಕೆ.ಗೋಪಾಲಯ್ಯ ಅವರ ಸಮ್ಮುಖದಲ್ಲಿದಲ್ಲಿ ತಮ್ಮ ಪಕ್ಷದ 14 ಮಂದಿ ಕಾರ್ಪೊರೇಟರ್ಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಇನ್ನು ಇದೇ ರೆಸಾರ್ಟ್ಗೆ ಪಕ್ಷೇತರರಾಗಿ ಆಯ್ಕೆಯಾಗಿರುವ ಆರು ಮಂದಿ ಕಾರ್ಪೊರೇಟರ್ ಗಳೂ ಕೂಡ ಆಗಮಿಸಲಿದ್ದು, ಚರ್ಚೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ಪಕ್ಷೇತರರೊಂದಿಗೆ ಜೆಡಿಎಸ್ ಮೈತ್ರಿ ಸಂಬಂಧ ಶಾಸಕರು ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.