ಮಹಿಳಾ ದಿನಾಚರಣೆ ದಿನವಾದ ಇಂದು ಕೂಡ ರಾಜ್ಯ ರಾಜಧಾನಿಯಲ್ಲಿ ಅತ್ಯಾಚಾರದ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಮ ಪಂಚಾಯತ್ ಸದಸ್ಯ ಸೇರಿ ಮೂವರು ತನ್ನ ಮೇಲೆ ನಿನ್ನೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು 36 ವರ್ಷದ ಮಹಿಳೆಯೊಬ್ಬರು ಹೆಚ್ಎಸ್ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ರೆಡ್ಡಿ ಮತ್ತಿಬ್ಬರು ಆರೋಪಿಗಳಾದ ಸುರೇಶ, ಮಂಜುನಾಥ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಈವರೆಗೆ ಎಫ್ಐಆರ್ ದಾಖಲಿಸಿಕೊಂಡಿಲ್ಲ.
ಮಗನ ಮುಂದೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಘಟನೆಯನ್ನು ಚಿತ್ರೀಕರಿಸಿಕೊಳ್ಳಲಾಗಿದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.
ಆದರೆ ಆರೋಪಿ ರೆಡ್ಡಿ ಕುಟುಂಬದವರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ದೂರು ನೀಡಿರುವ ಮಹಿಳೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಗ್ರಾಮಸ್ಥರು ದೂರು ನೀಡಿದ್ದರಿಂದ ಆ ಕುರಿತು ವಿಚಾರಿಸಲು ರೆಡ್ಡಿ ಮತ್ತು ಇತರ ಇಬ್ಬರು ನಿನ್ನೆ ಆಕೆಯ ಮನೆಗೆ ಹೋಗಿ ಬುದ್ಧಿ ಹೇಳಿದ್ದರು. ಈ ಕೋಪದಲ್ಲಿ ಆಕೆ ದೂರನ್ನು ನೀಡಿದ್ದಾಳೆ ಎಂದು ರೆಡ್ಡಿ ಪರಿವಾರದವರು ಆರೋಪಿಸುತ್ತಿದ್ದಾರೆ.
ತನಿಖೆಯ ಬಳಿಕವಷ್ಟೆ ಪ್ರಕರಣ ಸತ್ಯಾಸತ್ಯತೆ ಹೊರಬೀಳಲಿದೆ.