ಟ್ಯಾಂಕರ್ವೊಂದಕ್ಕೆ ಕ್ವಾಲಿಸ್ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕ್ವಾಲಿಸ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 9 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಕೊಡೈಕೆನಾಲ್ ಬಳಿ ನಡೆದಿದೆ.
ತಮಿಳುನಾಡಿನ ದಿಂಡಿಗಲ್ ಬಳಿ ಇರುವ ವತ್ತಲಗುಂಡು ರಸ್ತೆಯ ಸಿದ್ದಯ್ಯನಕೋಟೆ ಬಳಿ ಈ ದುರಂತ ಸಂಭವಿಸಿದ್ದು, ಟೊಯೋಟಾ ಕ್ವಾಲಿಸ್ ನಲ್ಲಿದ್ದ 9 ಮಂದಿ ಮೃತರಾಗಿದ್ದಾರೆ. ಮೃತರೆಲ್ಲರೂ ತಮಿಳುನಾಡಿನ ಅರವಕುಂಚಿ ನಿವಾಸಿಗಳಾಗಿದ್ದು, ಕೊಡೈಕೆನಾಲ್ನಿಂದ ಸಿದ್ದಯ್ಯನಕೋಟೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ದಿಂಡಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನಾ ಸ್ಥಳವನ್ನು ಪರಿಶೀಲಿಸಿದ್ದಾರೆ. ಅಲ್ಲದೆ ತನಿಖೆ ಮುಂದುವರಿಸಿದ್ದಾರೆ.