ಮಹಿಳೆಯರ ಶೌಚಾಲಯಕ್ಕೆ ಏಕಾಏಕಿ ದಿಢೀರನೆ ನುಗ್ಗಿದ ವ್ಯಕ್ತಿಯೋರ್ವನಿಗೆ ಯುವತಿಯೋರ್ವಳು ಮನ ಬಂದಂತೆ ಥಳಿಸಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕುಶಾಲನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದಿದೆ.
ಈ ಪ್ರಕರಣವು ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದ್ದು, ಮಹಿಳೆಯರ ಶೌಚಾಲಯಕ್ಕೆ ನುಗ್ಗಿದ್ದ ಯುವಕನನ್ನು ಅರುಣ ಎಂದು ಗುರುತಿಸಲಾಗಿದೆ. ಈತ ಹಾಸನ ಜಿಲ್ಲೆಯ ಅರಕಲಗೂಡು ನಿವಾಸಿಯಾಗಿದ್ದು, ಮಾನಸಿಕ ಅಸ್ವಸ್ಥನಾಗಿದ್ದ ಎಂದು ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ:
ಪ್ರವಾಸಕ್ಕೆಂದು ಆಗಮಿಸಿದ್ದ ಯುವತಿಯೋರ್ವಳು ಶೌಚಾಲಯಕ್ಕೆ ತೆರಳಿದ್ದಳು. ಇದನ್ನು ಕಂಡ ಯುವಕ ದಿಢೀರನೆ ಮಹಿಳಾ ಶೌಚಾಲಯದೊಳಗೆ ನುಗ್ಗಿದ್ದ. ಇದನ್ನು ಕಂಡ ಯುವತಿ ಚೀರಿಕೊಂಡು ಹೊರ ಓಡಿ ಬಂದಿದ್ದಾಳೆ. ಬಳಿಕ ವಿಷಯ ತಿಳಿದ ಸ್ಥಳೀಯರು ವ್ಯಕ್ತಿ ಅರುಣನನ್ನು ಹಿಡಿದು ಥಳಿಸಿದ್ದಾರೆ. ಈ ವೇಳೆ ಯುವತಿಯೂ ಕೂಡ ಮನ ಬಂದಂತೆ ಥಳಿಸಿದ್ದಾಳೆ. ತರುವಾಯ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ದೂರು ದಾಖಲಿಸಲು ಮುಂದಾದಾಗ ಆತ ಮಾನಸಿಕ ಅಸ್ವಸ್ಥ ಎಂಬುದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಯುವತಿ ಕೂಡ ದೂರು ದಾಖಲಿಸದೆ ವಾಪಾಸಾಗಿದ್ದಾಳೆ. ಅಲ್ಲದೆ ವ್ಯಕ್ತಿಯ ಕುಟುಂಬಸ್ಥರನ್ನು ಕರೆಸಿದ ಪೊಲೀಸರು, ಆತನನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಈ ಎಲ್ಲಾ ದೃಶ್ಯಾವಳಿಗಳನ್ನು ಸ್ಥಳೀಯರೋರ್ವರು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.