ತನ್ನ ಸೋದರನ ಅಂತ್ಯಕ್ರಿಯೆ ನಡೆಸಿ ಕಾರಿನಲ್ಲಿ ವಾಪಸಾಗುತ್ತಿದ್ದ ವ್ಯಕ್ತಿಯೊಬ್ಬರು ಕಾರು ಅಪಘಾತದಲ್ಲಿ ಮೃತಪಟ್ಟ ದುರಂತ ಗುರುವಾರ ಮುಂಜಾನೆ ಸಂಭವಿಸಿದೆ. ಹೆಮ್ಮಾಡಿಯ ರಘುಪತಿ ಪೂಜಾರಿ ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದು, ಅಂತ್ಯಕ್ರಿಯೆ ಮುಗಿಸಿಕೊಂಡು ಬೆಂಗಳೂರಿಗೆ ವಾಪಸಾಗುವಾಗ ವಿಧಿ ತನ್ನನ್ನು ಕೂಡ ಸೆಳೆಯುತ್ತದೆಂಬ ಕಲ್ಪನೆ ಅವರಿಗಿರಲಿಲ್ಲ.
ರಘುಪತಿ ಅವರ ಅಣ್ಣ ಶೀನಾ ಪೂಜಾರಿ ಸುದೀರ್ಘ ಕಾಯಿಲೆಯ ಬಳಿಕ ಹೆಮ್ಮಾಡಿಯಲ್ಲಿರುವ ಅವರ ನಿವಾಸದಲ್ಲಿ ಮೃತಪಟ್ಟಿದ್ದರು. ರಘುಪತಿ ಪತ್ನಿ ಶಾರದಾ ಮತ್ತು ಇಬ್ಬರು ಪುತ್ರರೊಂದಿಗೆ ಅಣ್ಣನ ಅಂತ್ಯಕ್ರಿಯೆಗೆ ಹೆಮ್ಮಾಡಿಗೆ ಆಗಮಿಸಿದ್ದರು. ಅಂತ್ಯಕ್ರಿಯೆ ಮುಗಿಸಿಕೊಂಡು ಕುಟುಂಬವು ಬೆಂಗಳೂರಿನತ್ತ ಪ್ರಯಾಣ ಬೆಳೆಸಿತ್ತು. ಗುರುವಾರ ಮುಂಜಾನೆ 3.30ಕ್ಕೆ ಮಾಗಡಿ ಬಳಿ ಚಾಲಕನಿಗೆ ಕಾರಿನ ನಿಯಂತ್ರಣ ತಪ್ಪಿದ್ದರಿಂದ ತಲೆಕೆಳಗಾಗಿ ಉರುಳಿಕೊಂಡಿತು.
ಮುಂಭಾಗದ ಸೀಟಿನಲ್ಲಿದ್ದ ರಘುಪತಿ ತಲೆಗೆ ತೀವ್ರ ಗಾಯಗಳಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲಕ, ರಘುಪತಿ ಪತ್ನಿ ಮತ್ತು ಮಕ್ಕಳು ಸಣ್ಣ ಗಾಯಗಳೊಂದಿಗೆ ಪಾರಾಗಿದ್ದಾರೆ. ಕೇವಲ ಮೂರು ದಿನಗಳ ಅವಧಿಯಲ್ಲಿ ಇಬ್ಬರನ್ನು ಕಳೆದುಕೊಂಡ ಕುಟುಂಬ ತೀವ್ರ ಆಘಾತ ಅನುಭವಿಸಿದೆ.