ತಮ್ಮನಿಗಾಗಿ ಕಟ್ಟಿದ್ದ ಜೋಲಿಯಲ್ಲಿ ಆಟವಾಡುತ್ತಿದ್ದಾಗ, ಅಚಾನಕ್ ಆಗಿ ಅದು ಕುತ್ತಿಗೆಗೆ ಸುತ್ತಿಕೊಂಡು ಬಾಲಕಿ ಮೃತಪಟ್ಟ ದಾರುಣ ಘಟನೆ ಸುಂಕದಕಟ್ಟೆಯಲ್ಲಿ ನಡೆದಿದೆ.
ಸುಂಕದಕಟ್ಟೆಯ ಮಾರ್ಕಂಡೇಶ್ವರನಗರ ನಿವಾಸಿ ಅಂಜಲಿ (9)ಮೃತ ದುರ್ದೈವಿಯಾಗಿದ್ದು ಆಕೆ ಮೂರನೆಯ ತರಗತಿಯಲ್ಲಿ ಓದುತ್ತಿದ್ದಳು. ಶನಿವಾರ ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಅಂಜಲಿ ತಾಯಿ ಗೌರಮ್ಮ ಮರು ಮದುವೆಯಾಗಿದ್ದರು. ಮೊದಲ ಪತಿಯಿಂದ ಇಬ್ಬರು ಮಕ್ಕಳನ್ನು ಹೊಂದಿರುವ ಗೌರಮ್ಮಗೆ ಎರಡನೆಯ ಪತಿಯಿಂದಲೂ ಸಹ ಇಬ್ಬರು ಮಕ್ಕಳಿದ್ದಾರೆ. ಅಂಜಲಿ ಹಿರಿಯ ಪತಿಯ ಮಗಳಾಗಿದ್ದು ಕೊನೆಯ ಮಗು ಭರತ್ಗೆಂದು ಜೋಲಿ ಕಟ್ಟಲಾಗಿತ್ತು.
ಶನಿವಾರ ಸಂಜೆ 4.30ರ ಸುಮಾರಿಗೆ ಆ ಜೋಲಿಯಲ್ಲಿ ಆಟವಾಡುತ್ತಿದ್ದ ದುರದೃಷ್ಟವಶಾತ್ ಆ ಜೋಲಿ ಕುತ್ತಿಗೆಗೆ ಸುತ್ತಿಕೊಂಡು ಉಸಿರುಗಟ್ಟಿ ಆಕೆ ಸಾವನ್ನಪ್ಪಿದ್ದಾಳೆ.
ಮಗುವಿನ ಸಾವಿನ ಹಿಂದೆ ಮಲ ತಂದೆ ಮೇಲೂ ಸಂಶಯ ಹುಟ್ಟಿಕೊಂಡಿದ್ದು ಈ ಕುರಿತು ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.