ಇದು ದೇಶದಲ್ಲೇ ಅತಿ ದೊಡ್ಡ ವಶೀಕರಣ ಪ್ರಕರಣ. ಉತ್ತರ ಪ್ರದೇಶದ ಅಮೇಥಿಯಲ್ಲಿ ಎಸ್ಟಿಎಫ್ ಸಿಬ್ಬಂದಿ ನಡೆಸಿದ ಒಂದು ಯಶಸ್ವಿ ಕಾರ್ಯಾಚರಣೆಯಲ್ಲಿ 6,400 ಆಮೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಕಳ್ಳಸಾಗಣೆ ಮಾಡುತ್ತಿದ್ದ ಜಾಲದ ಕಿಂಗ್ಪಿನ್ನನ್ನು ಕೂಡ ಬಂಧಿಸಲಾಗಿದೆ.
ಮುಖ್ಯ ಆರೋಪಿಯನ್ನು ರಾಜ್ ಬಹಾದ್ದೂರ್ ಎಂದು ಗುರುತಿಸಲಾಗಿದ್ದು ಗೌರಿಗಂಜ್ ನಗರದಲ್ಲಿರುವ ಆತನ ಮನೆಯಂಗಳದ ತುಂಬೆಲ್ಲ ಆಮೆಗಳು ಹರಿದಾಡುತ್ತಿರುವುದನ್ನು ಕಂಡವರೊಬ್ಬರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಾಚರಣೆ ನಡೆಸಿದ ಎಸ್ಟಿಎಫ್ ತಂಡ ಎಲ್ಲ ಆಮೆಗಳನ್ನು ವಶಪಡಿಸಿಕೊಂಡಿದೆ.
ಇವುಗಳನ್ನು ಗೋಣಿಚೀಲದಲ್ಲಿ ತುಂಬಿಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಮೆಗಳ ಕಳ್ಳಸಾಗಾಣಿಕೆ ಜಾಲದ ಮುಖ್ಯ ಆರೋಪಿಯೇ ಬಂಧನಕ್ಕೊಳಪಟ್ಟಿರುವುದರಿಂದ ಇತರ ಆರೋಪಿಗಳನ್ನು ಪತ್ತೆ ಹಚ್ಚುವುದು ಸುಲಭವಾಗಬಹುದು. ಈ ಆಮೆಗಳನ್ನು ಬಾಂಗ್ಲಾ, ಬರ್ಮಾ, ಚೀನಾ, ಥೈಲ್ಯಾಂಡ್, ಹಾಂಗ್ಕಾಂಗ್ ಸೇರಿದಂತೆ ಹಲವು ದೇಶಗಳಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.
20 ( 1 ಕಾಲಿಗೆ 5) ಉಗುರುಗಳುಳ್ಳ ಆಮೆ ಅದೃಷ್ಟವನ್ನು ತರುತ್ತದೆ ಎಂಬ ನಂಬಿಕೆ ಫೆಂಗ್ ಶೂಯಿ ಸಂಪ್ರದಾಯದಲ್ಲಿದೆ, ಎಂದು ವನ್ಯಜೀವಿ ಅಪರಾಧ ನಿಯಂತ್ರಣ ದಳದ ಹಿರಿಯ ಅಧಿಕಾರಿಗಳೊಬ್ಬರು ತಿಳಿಸಿದ್ದಾರೆ.