ಶಾಲಾ ವಿದ್ಯಾರ್ಥಿನಿಯಾಗಿದ್ದ 6 ವರ್ಷದ ಪುಟ್ಟ ಬಾಲಕಿಯ ಮೇಲೆ ಶಾಲಾ ಆವರಣದಲ್ಲೇ ಆಕೆಯ ದೈಹಿಕ ಶಿಕ್ಷಕ ಮತ್ತು ಸೆಕ್ಯೂರಿಟಿ ಗಾರ್ಡ್ ಇಬ್ಬರು ಸೇರಿ ಅತ್ಯಾಚಾರ ಮಾಡಿದ ಅಮಾನವೀಯ, ಹೇಯ ಪ್ರಕರಣ ಬೆಂಗಳೂರಿನ ಮಾರತಹಳ್ಳಿಯಲ್ಲಿರುವ ವಿಬ್ಗಯಾರ್ ಎಂಬ ಖಾಸಗಿ ಶಾಲೆಯಲ್ಲಿ ನಡೆದಿದೆ.
ಜುಲೈ 2 ರಂದು ಈ ಘಟನೆ ನಡೆದಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರವಾಗಿರುವುದು ಸಾಬೀತಾಗಿದ್ದುದರಿಂದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರಿಬ್ಬರನ್ನು ಬಂಧಿಸಲಾಗಿದೆ.
ಬಾಲಕಿ ಅಸ್ವಸ್ಥಳಾಗಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಆಕೆಯ ಪಾಲಕರಿಗೆ ಅವಳ ಮೇಲೆ ಅತ್ಯಾಚಾರ ನಡೆದಿರುವ ಕಹಿ ಸತ್ಯ ವೈದ್ಯರಿಂದ ಗೊತ್ತಾಗಿದೆ.
ಆರೋಪಿಗಳಿಬ್ಬರನ್ನು ಬಂಧಿಸಲಾಗಿದ್ದು ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಶಾಲಾ ಆಡಳಿತ ಮಂಡಳಿ ಈ ಆರೋಪವನ್ನು ನಿರಾಕರಿಸಿದ್ದು, ಈ ಕುರಿತು ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಲು ನಿರಾಕರಿಸಿವೆ.
ಉದ್ರಿಕ್ತ ಶಾಲಾ ಮಕ್ಕಳ ಪೋಷಕರು ಶಾಲೆಯನ್ನು ಸುತ್ತುವರೆದು ಪ್ರತಿಭಟನೆ ನಡೆಸುತ್ತಿದ್ದು ಶಾಲಾ ಪೀಠೋಪಕರ, ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ. ಮಾಜಿ ಶಾಸಕ ನಂದೀಶ್ ರೆಡ್ಡಿ ಕೂಡ ಪ್ರತಿಭಟನೆಯಲ್ಲಿ ಪಾಲಕರಿಗೆ ಸಾಥ್ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿರುವ ಹೆಚ್ಚುವರಿ ಪೋಲಿಸ್ ಕಮೀಷನರ್ ಪ್ರಣವ್ ಮೊಹಾಂತಿ, ಸಿಸಿಬಿ ಡಿಸಿಬಿ ಅಭಿಷೇಕ್ ಗೋಯಲ್ ವಾತಾವರಣವನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ.