ಮಾಜಿ ಶಾಸಕ ಕಿರಣ್ ಕುಮಾರ್ ಅವರಿಗೆ ಸೇರಿರುವ ತುಮಕೂರಿನ ಚಿಕ್ಕನಾಯಕನಹಳ್ಳಿ ಹುಳಿಯಾರ್ನಲ್ಲಿರುವ ವಿದ್ಯಾವಾರಿಧಿ ಅಂತರಾಷ್ಟ್ರೀಯ ಶಾಲೆಯ ವಸತಿ ನಿಲಯದಲ್ಲಿ ನಿನ್ನೆ ತಡರಾತ್ರಿ ಮೂವರು ವಿದ್ಯಾರ್ಥಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಶಾಂತಮೂರ್ತಿ, ಶ್ರೇಯಸ್, ಆಕಾಂಕ್ಷ ಪಲ್ಲಕ್ಕಿ ಮೃತ ವಿದ್ಯಾರ್ಥಿಗಳಾಗಿದ್ದಾರೆ. ಮೃತರಲ್ಲಿ ಇಬ್ಬರು 10ನೇ ತರಗತಿ ವಿದ್ಯಾರ್ಥಿಗಳಾಗಿದ್ದು, ಮತ್ತೊಬ್ಬ 8ನೇ ತರಗತಿ ಓದುತ್ತಿದ್ದ.
ಇನ್ನೊಬ್ಬ ವಿದ್ಯಾರ್ಥಿ ಸುದರ್ಶನ್ ಮತ್ತು ಭದ್ರತಾ ಸಿಬ್ಬಂದಿಯಾಗಿರುವ ರಮೇಶ್ ಎನ್ನುವವರು ಸಹ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು ವಿದ್ಯಾರ್ಥಿ ಅಪಾಯದಿಂದ ಪಾರಾಗಿದ್ದರೆ, ರಮೇಶ್ ಸ್ಥಿತಿ ಚಿಂತಾಜನಕವಾಗಿ ಎನ್ನಲಾಗುತ್ತಿದೆ.
ಈ ನಾಲ್ವರು ಮಕ್ಕಳು ಮೊದಲೇ ಅನ್ನಸಾಂಬಾರ್ ಸೇವಿಸಿದ್ದು, ಊಟ ಕಹಿಯಾಗಿದೆ ಎಂದು ಹೇಳಿದ್ದರಿಂದ ಉಳಿದ ಮಕ್ಕಳು ಅನ್ನಸಾಂಬಾರ್ ಸೇವಿಸದೇ ಕೇವಲ ಚಪಾತಿ ಪಲ್ಯ ತಿಂದಿದ್ದರಿಂದ ಆಗಲಿದ್ದ ಮತ್ತೂ ದೊಡ್ಡ ಅನಾಹುತ ತಪ್ಪಿದೆ.
ಯಾವ ಕಾರಣದಿಂದ ಈ ಅಚಾತುರ್ಯ ನಡೆಯಿತು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಶಾಸಕರು, ಯಾರೋ ಹೊರಗಿನವರು ಬಂದು ಊಟದಲ್ಲಿ ವಿಷ ಬೆರೆಸಿರಬಹುದು ಎಂಬ ಅನುಮಾನವಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದೇನೆ ಎಂದಿದ್ದಾರೆ.