ಹೊಸ ಪಕ್ಷ ಕಟ್ಟೋದು ನೂರರಷ್ಟು ಸತ್ಯ: ಶ್ರೀರಾಮುಲು ನುಡಿ
ಬಳ್ಳಾರಿ , ಬುಧವಾರ, 30 ನವೆಂಬರ್ 2011 (12:32 IST)
ನಾವು ರಾಜ್ಯದಲ್ಲಿ ಹೊಸ ಪಕ್ಷ ಕಟ್ಟುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಿ.ಶ್ರೀರಾಮುಲು ಬುಧವಾರ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್ದುನಿಯಾಕ್ಕೆ ಭೇಟಿ ಕೊಡಿಬಳ್ಳಾರಿ ಉಪ ಚುನಾವಣೆಯ ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಗರದ ದುರ್ಗಮ್ಮ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶದ ನಂತರ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಹೊಸ ಪಕ್ಷ ಕಟ್ಟುವ ಬಗ್ಗೆ ಬುದ್ದಿಜೀವಿಗಳು, ಸಾಹಿತಿಗಳ ಜತೆ ಒಂದು ಸುತ್ತಿನ ಮಾತುಕತೆ ನಡೆಸುತ್ತೇನೆ. ನಂತರ ಮಿತ್ರ ಜನಾರ್ದನ ರೆಡ್ಡಿಯವರ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಈ ಸಂದರ್ಭದಲ್ಲಿ ಹೇಳಿದರು.ಬಳ್ಳಾರಿಯಲ್ಲಿ ಕಾಂಗ್ರೆಸ್ ಕೋಟೆಯನ್ನು ಪುಡಗಟ್ಟಿ, ಬಿಜೆಪಿ ಬಾವುಟ ಹಾರಲು ರೆಡ್ಡಿ ಸಹೋದರರು ಮತ್ತು ನನ್ನ ಶ್ರಮ ಅಪಾರವಾದದ್ದು. ಆದರೆ, ಬಿಜೆಪಿ ಪಕ್ಷ ನಮ್ಮನ್ನು ದಾಳವಾಗಿ ಉಪಯೋಗಿಸಿಕೊಂಡು ಈಗ ನಮ್ಮ ವಿರುದ್ಧವೇ ಆರೋಪಿಸುತ್ತಿದ್ದಾರೆ ಎಂದು ದೂರಿದರು.ಆ ನಿಟ್ಟಿನಲ್ಲಿ ನಾವು ನಮ್ಮದೇ ಹೊಸ ಪಕ್ಷ ಕಟ್ಟುವ ಮೂಲಕ ಜನರ ಸೇವೆ ಮಾಡಲು ಮುಂದಾಗುವುದಾಗಿ ಹೇಳಿದರು. ಚುನಾವಣಾ ಫಲಿತಾಂಶದ ನಂತರ ಹೊಸ ಪಕ್ಷ ರಚನೆ ಬಗ್ಗೆ ಅಧಿಕೃತವಾಗಿ ಘೋಷಿಸುವುದಾಗಿ ತಿಳಿಸಿದರು. ರಾಜ್ಯದಲ್ಲಿ ಹೊಸ ಪಕ್ಷ ಕಟ್ಟಿದವರು ಯಾರೂ ಉದ್ಧಾರ ಆಗಿಲ್ಲ ಎಂದು ಗೃಹ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.