ನಗರದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಐವರನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆ.ಆರ್.ಪುರದ ರಾಜೇಶ್ ಕುಮಾರ ಗುಪ್ತಾ, ವಿ.ಮಹೇಶ್, ಕೊಡಿಗೇಹಳ್ಳಿಯ ಕಮಲೇಶ್, ದೊಡ್ಡಬೊಮ್ಮಸಂದ್ರದ ದೀಪುರಾಜ್ ಹಾಗೂ ಮತ್ತಿಕೆರೆಯ ಗಿರೀಶ್ ಬಂಧಿತರು.
ಇತ್ತೀಚೆಗೆ ಎ.ನಾರಾಯಣಪುರ ರಸ್ತೆಯಲ್ಲಿ ರಾತ್ರಿ ವೇಳೆ ನಿಂತಿದ್ದ ಆರೋಪಿಗಳನ್ನು ಶಂಕೆಯ ಮೇರೆಗೆ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ವೇಶ್ಯಾವಾಟಿಕೆ ದಂಧೆ ಬೆಳಕಿಗೆ ಬಂದಿದೆ.
ವೇಶ್ಯಾವಾಟಿಕೆ ದಂಧೆ ಹೇಗೆ?
ಮುಂಬೈ ಹಾಗೂ ಕೊಲ್ಕತ್ತಾ ಮೂಲದ ಯುವತಿಯರಿಗೆ ಬೆಂಗಳೂರಿನಲ್ಲಿ 'ಸಂಪರ್ಕ' ಕಲ್ಪಿಸಿಕೊಡುವ ಮೂಲಕ ಇವರು ವೇಶ್ಯಾವಾಟಿಕೆ ದಂಧೆಯಲ್ಲಿ ನಿರತರಾಗಿದ್ದರು. ಈ ದಂಧೆಯಲ್ಲಿ ನಾಲ್ವರು ಯುವತಿಯರೂ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೂ.6 ರಂದು ರಾತ್ರಿ ಎ.ನಾರಾಯಣಪುರದಲ್ಲಿ ಯುವತಿಯರೊಂದಿಗೆ ಆರೋಪಿಗಳು ಗಿರಾಕಿಗಾಗಿ ಕಾಯುತ್ತಿದ್ದರು. ಅದೇ ವೇಳೆ ರಾತ್ರಿ ಪಾಳಿಯಲ್ಲಿದ್ದ ಪೊಲೀಸರನ್ನು ಕಂಡ ಕೂಡಲೇ ಯುವತಿಯರು ಆಟೋದಲ್ಲಿ ಪರಾರಿಯಾಗಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಯುವಕರನ್ನು ವಶಕ್ಕೆಪಡೆದು ವಿಚಾರಣೆ ನಡೆಸಿದಾಗ ವೇಶ್ಯಾವಾಟಿಕೆ ದಂಧೆ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.