ಬೆಂಗಳೂರು: ಹುತಾತ್ಮ ಯೋಧ ಶ್ರೀಕಾಂತ್ ಮಾಡಗಿ(26) ಅಂತ್ಯಕ್ರಿಯೆಯನ್ನು ಬೆಂಗಳೂರಿನ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನಡೆಸಲಾಯಿತು. ಪಂಜಾಬ್ ಲೂಧಿಯಾನ ಬಳಿ ಶ್ರೀಕಾಂತ್ ಸಾವನ್ನಪ್ಪಿದ್ದರು. ತಾಯಿ ಜತೆ ಕೊನೆ ಬಾರಿ ಫೋನಿನಲ್ಲಿ ಮಾತನಾಡಿ ಯೋಗಕ್ಷೇಮ ವಿಚಾರಿಸಿದ ಕೆಲವೇ ಗಂಟೆಗಳಲ್ಲಿ ಶ್ರೀಕಾಂತ್ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದೆರಗಿತು. ಪಾಕಿಸ್ತಾನ-ಪಂಜಾಬ್ ಗಡಿಭಾಗದಲ್ಲಿ ಗುರುವಾರ ಏಪ್ರಿಲ್ 3ರಂದು ಸಂಜೆ ಗುಂಡಿನ ದಾಳಿಯಲ್ಲಿ ವಾಯುದಳದ ಪೈಲಟ್ ಶ್ರೀಕಾಂತ್ ಮಾಡಗಿ ಮೃತಪಟ್ಟಿದ್ದರು.
ಚಿಕ್ಕಂದಿನಿಂದಲೂ ಸೈನ್ಯಕ್ಕೆ ಸೇರಿ ದೇಶಸೇವೆ ಮಾಡುವ ಕನಸು ಕಾಣುತ್ತಿದ್ದ ಶ್ರೀಕಾಂತ್ ರಾಷ್ಟ್ರೀಯ ರಕ್ಷಣಾದಳದಲ್ಲಿ ಮೂರು ವರ್ಷಗಳ ತರಬೇತಿ ಬಳಿಕ ಏರ್ಫೋರ್ಸ್ನಲ್ಲಿ ಫ್ಲೈಟ್ ಲೆಫ್ಟಿನೆಂಟ್ ಹುದ್ದೆಗೆ ಸೇರಿದ್ದರು.ಗುರುವಾರ ಮಧ್ಯಾಹ್ನ ತಾಯಿಗೆ ಕರೆ ಮಾಡಿ ತಾನು ಆರೋಗ್ಯವಾಗಿರುವುದಾಗಿ ಹೇಳಿ ತಾಯಿಯ ಯೋಗಕ್ಷೇಮ ವಿಚಾರಿಸಿದ್ದ. ಆದರೆ ಗುರುವಾರ ಸಂಜೆಯ ಮಗನು ಗುಂಡಿನ ಕಾಳಗದಲ್ಲಿ ಮೃತಪಟ್ಟ ಸುದ್ದಿ ಬರಸಿಡಿಲಿನಂತೆ ಬಂದೆರಗಿದ್ದರಿಂದ ಕುಟುಂಬ ಶೋಕಸಾಗರದಲ್ಲಿ ಮುಳುಗಿತ್ತು. ಮಗನ ಸಾವು ಸಂಭವಿಸಿದ್ದು ಹೇಗೆಂದು ಇನ್ನೂ ಸರಿಯಾಗಿ ತಿಳಿದುಬಂದಿಲ್ಲ ಎಂದು ಕುಟಂಬ ಹೇಳಿದೆ.