ಜಿಲ್ಲೆಯ ರೈತ ಬಾಂಧವರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದ್ರಲ್ಲೂ ದಾವಣಗೆರೆಯಲ್ಲಿನ ಹತ್ತಿ ಬೆಳೆಗಾರರು ಮಾತ್ರ ಎಲ್ಲಿಲ್ಲದ ಸಂಕಷ್ಟವನ್ನು ಎದುರಿಸುವಂತಾಗಿದೆ. ರೈತರು ಬೆಳೆದ ಹತ್ತಿ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು, ಇದಕ್ಕೆ ಮೂಲ ಕಾರಣ ಕಳಪೆ ಗುಣಮಟ್ಟದ ಹತ್ತಿ ಬೀಜಗಳು ಎಂದು ತಿಳಿದು ಬಂದಿದೆ. ಹೀಗಾಗಿ ಹತ್ತಿ ಬೀಜಗಳನ್ನು ನೀಡಿದ ಮೈಕೋ ಕಂಪೆನಿಯ ವಿರುದ್ಧ ಇದೀಗ ರೈತರು ಆಕ್ರೋಷವನ್ನು ವ್ಯಕ್ತಪಡಿಸುತ್ತಿದ್ದು, ಜಿಲ್ಲಾಡಳಿತದ ವಿರುದ್ಧ ಪ್ರತಿಬಟನೆಯನ್ನು ನಡೆಸುತ್ತಿದ್ದಾರೆ.
ದಾವಣೆಗೆರೆ ಜಿಲ್ಲೆ ಸೆರಿದಂತೆ ಸುತ್ತಮುತ್ತಲಿನ ಪ್ರದೇಶಗಳು ಹತ್ತಿ ಬೆಳೆಗೆ ಯೋಗ್ಯವಾದ ಪ್ರದೇಶಗಳಾಗಿವೆ. ಹೀಗಾಗಿಯೇ ಇಲ್ಲಿ ಅನೇಕ ಹತ್ತಿ ಗಿರಣಿಗಳು ಸ್ಥಾಪನೆಗೊಂಡಿವೆ. ಆದ್ರೆ ಮೈಕೋ ಕಂಪೆನಿ ನೀಡಿದ ಕಳಪೆ ಗುಣಮಟ್ಟದ ಹತ್ತಿ ಬೀಜಗಳಿಂದಾಗಿ ಹತ್ತಿ ಗಿಡಗಳು ಕಾಯಿಯನ್ನೇ ಬಿಟ್ಟಿಲ್ಲ. ಇದರಿಂದಾಗಿ ರೈತರು ಕಂಗಾಲಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದಾಗ "ಎಸ್ವಿ ಪಾಟೀಲ್ ಅವರ ನೇತೃತ್ವದ ತಜ್ಞರ ತಂಡ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆಗ ಹತ್ತಿ ಬೀಜದ ಕಳಪೆ ಗುಣಮಟ್ಟವೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.
ಮೈಕೋ ಸಂಸ್ಥೆ ನೀಡಿದ ಈ ಕಳಪೆ ಹತ್ತಿ ಬೀಜಗಳಿಂದಾಗಿ ರೈತರಿಗೆ ನಷ್ಟವಾಗಿದ್ದು ಈ ಸಂಬಂಧ ಜಿಲ್ಲಾಡಳಿತ ಮೈಕೋ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತರು ಅಗ್ರಹಿಸಿದ್ದಾರೆ. ಅಷ್ಟೆ ಅಲ್ಲ, ಹಾನಿಗೀಡಾದ ರೈತರಿಗೆ ಪ್ರತಿ ಎಕರೆಗೆ 75 ಸಾವಿರದಿಂದ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಪ್ರತಿಭಟನಾ ನಿರತ ರೈತರು ಆಗ್ರಹಿಸಿದ್ದಾರೆ.