ಐದು ಕೊಲೆ ಮತ್ತು 23 ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಜೆಸಿಬಿ ನಾರಾಯಣನನ್ನು ಪೊಲೀಸರು ಬಂಧಿಸಿದ್ದಾರೆ.
ಸುಪಾರಿ ಹಣ ಕೊಡದ ಪುಟ್ಟರಾಜು ಎಂಬಾತನನ್ನು ಕೊಲೆ ಮಾಡಲು ಸಹಚರರೊಂದಿಗೆ ಹೊಂಚು ಹಾಕುತ್ತಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಸಹಚರರಾದ ಬೇಗೂರಿನ ಸಾಯಿಕುಮಾರ, ಸ್ಪೆಟರ್ ಫ್ರಾನ್ಸಿಸ್ ಸುನೀಲ್ ಜತೆ ಹೊಂಚುಹಾಕುತ್ತಿದ್ದಾಗ ಮತ್ತೆ ಸೆರೆಗೆ ಸಿಕ್ಕಿದ್ದು, ಆತನಿಂದ ರಿವಾಲ್ವಾರ್, ಪಿಸ್ತೂಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
2005 ರಲ್ಲಿ ರಾಜೇಶ್ ಎಂಬ ವ್ಯಕ್ತಿಯನ್ನು ಕೊಲೆಗೈಯ್ಯಲು ಜೆಸಿಬಿ ನಾರಾಯಣನಿಗೆ ಪುಟ್ಟರಾಜು ಎಂಬಾತ 30 ಲಕ್ಷ ರೂಪಾಯಿಯ ಸುಪಾರಿ ಕೊಟ್ಟಿದ್ದರು. ಜೆಸಿಬಿ ನಾರಾಯಣ ತನ್ನ ಸಹಚರರ ಜತೆ ಸೇರಿ ರಾಜೇಶ ಎಂಬಾತನನ್ನು ಕೊಲೆ ಮಾಡಿದ್ದ.
ಕೊಲೆ ನಂತರ ಒಪ್ಪಂದದಂತೆ ಹಣ ಕೊಡಲು ಪುಟ್ಟರಾಜು ಸತಾಯಿಸಿದ್ದರಿಂದ ಆತನ ಮೇಲೆ ಹಲ್ಲೆ ಮಾಡಿ ಬೆದರಿಸಿ ಹಣ ವಸೂಲು ಮಾಡುವುದು ಈ ಸಂಚಿನ ಉದ್ದೇಶವಾಗಿತ್ತು.
ಪೊಲೀಸರ್ ದಾಳಿಯ ಸಮಯದಲ್ಲಿ ಇನ್ನಿಬ್ಬರು ರೌಡಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ.
ಕಾರ್ಯಾಚರಣೆಯಲ್ಲಿ ಜಂಟಿ ಪೊಲೀಸರ್ ಆಯುಕ್ತ ಗೋಪಾಲ್ ಹೊಸೂರ್, ಡಿಸಿಪಿ ಎಸ್.ಎನ್. ಸಿದ್ದರಾಮಪ್ಪ, ಮಾರ್ಗದರ್ಶನದೊಂದಿಗೆ ಎಸಿಪಿ ವೆಂಕಟೇಶ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ಅಶೋಕನ್, ಬಾಳೇಗೌಡ, ಯಲಗಯ್ಯ, ರವಿಪ್ರಕಾಶ್ ಮತ್ತು ರೇಣುಪ್ರಸಾದ್ ಅವರುಗಳು ಪಾಲ್ಗೊಂಡಿದ್ದರು.