ಸಿಎಂ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ದೂರುಗಳ ಸುರಿಮಳೆ
ಬೆಂಗಳೂರು , ಗುರುವಾರ, 17 ಅಕ್ಟೋಬರ್ 2013 (15:44 IST)
ನಾಳೆ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಸಿಎಂ ಸಿದ್ರಾಮಯ್ಯನವರ ವಿರುದ್ಧ ಅತೃಪ್ತ ಕಾಂಗ್ರೆಸ್ ಕಾರ್ಯಕರ್ತರು ವರಿಷ್ಟರಿಗೆ ದೂರುಗಳ ಸರಮಾಲೆಯನ್ನು ನೀಡಲು ಸಜ್ಜಾಗಿದ್ದಾರೆ. ಸಿಎಂ ಸಿದ್ರಾಮಯ್ಯನವರ ವಿರುದ್ಧ ಅಸಮಾಧಾನವನ್ನು ಹೊರ ಹಾಕಿರುವ ಕೆಲವು ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಉಸ್ತುವಾರಿ ಹೊತ್ತಿರುವ ಕೇಂದ್ರ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ದೂರುಗಳನ್ನು ನೀಡಲು ಕಾರ್ಯಕಾರಿಣಿ ಸಭೆಯನ್ನು ಬಳಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಬೆಂಗಳುರಿನಲ್ಲಿ ಇದೇ 18 ರಂದು ನಡೆಯಲಿರುವ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಗೆ ರಾಜ್ಯ ಉಸ್ತುವಾರಿ ಹೊತ್ತಿರುವ ದಿಗ್ವಿಜಯ್ ಸಿಂಗ್ ಆಗಮಿಸಲಿದ್ದಾರೆ. ಸಿದ್ರಾಮಯ್ಯನವರು ಸಿಎಂ ಆದ ಬಳಿಕ ಕಾರ್ಯಕರ್ತರನ್ನು ಕಡೆಗಣಿಸಿದ್ದಾರಂತೆ. ಹೀಗಾಗಿ ದಿಗ್ವಿಜಯ್ ಸಿಂಗ್ ನಾಯಕತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಸಿಎಂ ವಿರುದ್ಧ ಅಸಮಾಧಾನವನ್ನು ಹೊಂದಿರುವ ಕಾಯಕರ್ತರು ಸಿಎಂ ಕಾರ್ಯ ವೈಖರಿ ವಿರುದ್ಧ ದೂರುಗಳ ಸುರಿಮಳೆ ಸುರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.